ಗೆಳೆಯನನ್ನು ರಕ್ಷಿಸಲು ಹೋಗಿ ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
ಶಂಕರನಾರಾಯಣ, ಮೇ 5: ಹೊಳೆಯಲ್ಲಿ ಮುಳುಗುತ್ತಿದ್ದ ಗೆಳೆಯನನ್ನು ರಕ್ಷಿಸಲು ಹೋದ ವಿದ್ಯಾರ್ಥಿಯೋರ್ವ ನೀರಿಗೆ ಬಿದ್ದು ಮೃತಪಟ್ಟ ಘಟನೆ ಶೇಡಿಗುಂಡಿಯ ಕುಂಬಾರಮಕ್ಕಿ ವಾರಾಹಿ ಹೊಳೆಯಲ್ಲಿ ನಡೆದಿದೆ.
ಮೃತನನ್ನು ಅಂಪಾರು ಮೂಡುಬಗೆಯ ಸುಬ್ಬಣ್ಣ ಶೆಟ್ಟಿ ಎಂಬವರ ಪುತ್ರ ಅಮೋಘ ಶೆಟ್ಟಿ(17) ಎಂದು ಗುರುತಿಸಲಾಗಿದೆ. ಶಂಕರನಾರಾಯಣ ಸೈಂಟ್ ತೆರೆಸಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಅಮೋಘ, ತನ್ನ ಇತರ 8 ಮಂದಿ ಗೆಳೆಯರೊಂದಿಗೆ ಕುಂಬಾರಮಕ್ಕಿ ಹೊಳೆಯಲ್ಲಿ ಈಜಲು ತೆರಳಿದ್ದನು.
ಎಲ್ಲರೂ ನೀರಿನಲ್ಲಿ ಆಡುತ್ತಿದ್ದಾಗ ಅವರಲ್ಲಿ ಸತೀಶ್ ಎಂಬಾತ ನೀರಿನಲ್ಲಿ ಮುಳುಗಿದ್ದ. ಸರಿಯಾಗಿ ಈಜು ಬಾರದ ಅಮೋಘ್ ತನ್ನ ಗೆಳೆಯನನ್ನು ರಕ್ಷಿಸಲು ಮುಂದಾಗಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾನೆ. ಇತರ ಗೆಳೆಯರು ಕೋಲು ನೀಡಿ ಸತೀಶ್ನನ್ನು ರಕ್ಷಣೆ ಮಾಡಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಸುಮಾರು 45 ನಿಮಿಷಗಳ ಬಳಿಕ ಅಮೋಘನ ಮೃತದೇಹವನ್ನು ಮೇಲಕ್ಕೆತ್ತಿದರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.