ನಾಪತ್ತೆಯಾದ ಭಾರತೀಯ ಪರ್ವತಾರೋಹಿ ಎವರೆಸ್ಟ್ನಲ್ಲಿ ಶವವಾಗಿ ಪತ್ತೆ
ಕಠ್ಮಂಡು, ಮೇ 22: ವೌಂಟ್ ಎವರೆಸ್ಟ್ ಶಿಖರದಲ್ಲಿ ನಾಪತ್ತೆಯಾಗಿರುವ ಭಾರತೀಯ ಪರ್ವತಾರೋಹಿ ರವಿ ಕುಮಾರ್ರ ಮೃತದೇಹವನ್ನು ರಕ್ಷಣಾ ಕಾರ್ಯಕರ್ತರು ಸೋಮವಾರ ಪತ್ತೆಹಚ್ಚಿದ್ದಾರೆ.
ಇದರೊಂದಿಗೆ ಕಳೆದ ವಾರಾಂತ್ಯದಲ್ಲಿ ‘ಸಾವಿನ ವಲಯ’ವೆಂದೇ ಕರೆಯಲ್ಪಡುವ ಈ ಪ್ರದೇಶದಲ್ಲಿ ಮೃತಪಟ್ಟ ಪರ್ವತಾರೋಹಿಗಳ ಸಂಖ್ಯೆ ನಾಲ್ಕಕ್ಕೇರಿದೆ.
ಉತ್ತರಪ್ರದೇಶದ ಮೊರಾದಾಬಾದ್ನ 27 ವರ್ಷದ ರವಿಕುಮಾರ್, ಶನಿವಾರ ಬಾಲ್ಕನಿ ಪ್ರದೇಶದೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಬಾಲ್ಕನಿ ಪ್ರದೇಶವು ಆರೋಹಿಗಳು ಎವರೆಸ್ಟ್ನ ದಕ್ಷಿಣ ಶೃಂಗವನ್ನು ಹತ್ತುವ ಮೊದಲಿನ ಕೊನೆಯ ವಿಶ್ರಾಂತಿ ಸ್ಥಳವಾಗಿದೆ.
8,848 ಮೀಟರ್ ಎತ್ತರದ ಶಿಖರವನ್ನು ರವಿ ಯಶಸ್ವಿಯಾಗಿ ಶನಿವಾರ ಮಧ್ಯಾಹ್ನ 1:28ಕ್ಕೆ ಹತ್ತಿದ್ದರು. ಬಳಿಕ ಶಿಖರದಿಂದ ಇಳಿಯುವಾಗ ನಾಪತ್ತೆಯಾಗಿದ್ದರು. ಅವರ ಆರೋಹಣ ಮಾರ್ಗದರ್ಶಿ ಲಕ್ಪ ವೊಂಗ್ಯ ಶೆರ್ಪ ಕೂಡ ನಾಲ್ಕನೆ ಶಿಬಿರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ಪರ್ವತಾರೋಹಣ ಋತುವಿನಲ್ಲಿ ಕನಿಷ್ಠ ಐವರು ಆರೋಹಿಗಳು ಪ್ರಾಣ ಕಳೆದುಕೊಂಡಿದ್ದಾರೆ.