ಅಸ್ಸಾಮಿನಲ್ಲಿ ನಡೆದಿದ್ದ ಎನ್‌ಕೌಂಟರ್ ನಕಲಿ: ಹಿರಿಯ ಸಿಆರ್‌ಪಿಎಫ್ ಅಧಿಕಾರಿಯ ವರದಿ

Update: 2017-05-24 09:02 GMT

ಹೊಸದಿಲ್ಲಿ,ಮೇ 24: ಮಾ.30ರಂದು ಭದ್ರತಾ ಸಿಬ್ಬಂದಿಗಳೊಂದಿಗಿನ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿರುವ ಇಬ್ಬರು ಬೋಡೊ ಉಗ್ರರನ್ನು ಮೊದಲೇ ವಶಕ್ಕೆ ತೆಗೆದುಕೊಂಡು, ಬಳಿಕ ಕ್ರೂರವಾಗಿ ಕೊಲ್ಲಲಾಗಿತ್ತು ಎಂದು ಅಸ್ಸಾಂ ಮತ್ತು ಈಶಾನ್ಯ ಭಾರತದ ಇತರ ಭಾಗಗಳಲ್ಲಿ ಬಂಡಾಯ ನಿಗ್ರಹ ಪಡೆಯ ಉಸ್ತುವಾರಿ ಹೊಂದಿರುವ ಸಿಆರ್‌ಪಿಎಫ್‌ನ ಮಹಾ ನಿರ್ದೇಶಕ ರಜನೀಶ್ ರಾಯ್ ಅವರು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. ಈ ‘ಪೂರ್ವಯೋಜಿತ ಕೊಲೆ ’ಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಅವರು ಸೂಚಿಸಿದ್ದಾರೆ.

ಮಾ.30ರಂದು ಸಂಜೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಾಲ್ಕೈದು ವ್ಯಕ್ತಿಗಳ ಗುಂಪು ಅವರ ಮೇಲೆ ಗುಂಡಿನ ಮಳೆಗರೆದಿತ್ತು. ಪ್ರತಿದಾಳಿ ನಡೆಸಿದಾಗ ಇಬ್ಬರು ಶಂಕಿತ ಬೋಡೊ ಉಗ್ರರು ಕೊಲ್ಲಲ್ಪಟ್ಟಿ ದ್ದಾರೆ. ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಆರ್‌ಪಿಎಫ್‌ನ ಅಧಿಕೃತ ವರದಿಯಲ್ಲಿ ಹೇಳಿದ್ದರು.

ಈ ವರದಿಯನ್ನು ಪರಿಶೀಲಿಸಿರುವ ರಾಯ್ ಅದರಲ್ಲಿನ ಹೇಳಿಕೆಗಳು ಕೆಲವೆಡೆ ಪರಸ್ಪರ ತಾಳೆಯಾಗುತ್ತಿಲ್ಲ ಎನ್ನುವುದನ್ನು ಪತ್ತೆಹಚ್ಚಿದ್ದಾರೆ.

ಅನೇಕ ಸಾಕ್ಷಾಧಾರಗಳನ್ನು ಆಧರಿಸಿ ತನ್ನ ವರದಿಯನ್ನು ಸಿದ್ಧಪಡಿಸಿರುವ ರಾಯ್, ಮೃತರಾಗಿರುವ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಮೊದಲೇ ಇನ್ನೊಂದು ಗ್ರಾಮದಿಂದ ತಮ್ಮ ವಶಕ್ಕೆ ತೆಗೆದುಕೊಂಡಿದ್ದನ್ನು ನೋಡಿರುವ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಗಳು ಚೀನಿ ನಿರ್ಮಿತ ಗ್ರೆನೇಡೊಂದನ್ನು ಮಾತ್ರ ವಶಪಡಿಕೊಂಡಿದ್ದು, ಇತರ ಶಸ್ತ್ರಾಸ್ತ್ರಗಳನ್ನು ಪೊಲೀಸರೇ ಶವಗಳ ಬಳಿ ಇರಿಸಿದ್ದರು ಎಂದು ವರದಿಯು ಬೆಟ್ಟುಮಾಡಿದೆ.

ತಮ್ಮ ವಶದಲ್ಲಿದ್ದ ಇಬ್ಬರು ವ್ಯಕ್ತಿಗಳ ಪೂರ್ವಯೋಜಿತ ಕೊಲೆಗಳನ್ನು ಮುಚ್ಚಿಡಲು ಮತ್ತು ವೃತ್ತಿಪರ ಸಾಧನೆಯ ಶೌರ್ಯಪೂರ್ಣ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎಂದು ಬಿಂಬಿಸಲು ಭದ್ರತಾ ಪಡೆಗಳಿಂದ ಜಂಟಿ ಕಾರ್ಯಾಚರಣೆಯ ಕಟ್ಟುಕತೆಯನ್ನು ಸಿಆರ್‌ಪಿಎಫ್‌ನ ವರದಿಯಲ್ಲಿ ಮಂಡಿಸಲಾಗಿದೆ ಎಂದು ರಾಯ್ ತನ್ನ ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News