ಹಿಂದೂ ರಾಷ್ಟ್ರದ ಪ್ರತಿಪಾದನೆ ಬದಿಗಿಟ್ಟು ದೇಶ ಕಟ್ಟಿ: ಬಿಜೆಪಿಗೆ ನಟ ಸಿದ್ಧಾರ್ಥ್ ಕರೆ

Update: 2017-06-02 18:25 GMT

ಚೆನ್ನೈ, ಜೂ.2: ಗೋಹತ್ಯೆಗೆ ಸಂಬಂಧಿಸಿ ಕೇಂದ್ರ ಸರಕಾರದ ಆದೇಶವನ್ನು ವಿರೋಧಿಸುತ್ತಿರುವವರನ್ನು ಬೆಂಬಲಿಸಿರುವ ಬಹುಭಾಷಾ ನಟ ಸಿದ್ಧಾರ್ಥ್, ಜನರ ಖಾಸಗಿ ಆಯ್ಕೆಗಳಿಂದ ಬಿಜೆಪಿ ದೂರ ನಿಲ್ಲಬೇಕು. ಹಿಂದೂ ರಾಷ್ಟ್ರದ ಪ್ರತಿಪಾದನೆ ಬದಿಗಿಟ್ಟು ದೇಶ ಕಟ್ಟಬೇಕು ಎಂದು ಟ್ವೀಟ್ ಮಾಡಿದ್ದಾರೆ.

“ಕಸಾಯಿಖಾನೆಗಳ ಬಗೆಗಿನ ವಿವಾದ ಅನಗತ್ಯವಾಗಿದ್ದು, ಜನರನ್ನು ವಿಭಜಿಸುತ್ತಿದೆ. ರಾಜ್ಯ ಸರಕಾರಗಳು ಕಸಾಯಿಖಾನೆಗಳಿಗೆ ಅನುಮತಿ ನೀಡಬಹುದು ಅಥವಾ ನೀಡದೇ ಇರಬಹುದು. ಆದರೆ ಕೇಂದ್ರ ಸರಕಾರ ಇದರಲ್ಲಿ ಮೂಗು ತೂರಿಸಬಾರದು. ನಮ್ಮಲ್ಲಿ ಹೆಚ್ಚಿನವರು “ಭಕ್ತರೂ”, “ಲಿಬ್ಟಾರ್ಡ್ಸ್” (ಜಾತ್ಯಾತೀತರನ್ನು ಕೋಮುವಾದಿಗಳು ಕರೆಯುವ ಹೆಸರು) ಗಳೂ ಅಥವಾ ಇಂತಹ ಕೆಟ್ಟ ಹೆಸರುಗಳನ್ನು ಹೊಂದಿರುವವರಲ್ಲ. ನಾವು ಭಾರತೀಯರು ಮಾತ್ರ. ನೀವು ಬದುಕಿ ಇತರರನ್ನೂ ಬದುಕಲು ಬಿಡಿ. ದ್ವೇಷ ಭಾವನೆಯನ್ನು ನಿಲ್ಲಿಸಿ” ಎಂದು ಕೇಂದ್ರದ ವಿರುದ್ಧ ಟ್ವೀಟ್ ಮೂಲಕ ಸಿದ್ಧಾರ್ಥ್  ವಾಗ್ದಾಳಿ ನಡೆಸಿದ್ದಾರೆ.

ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿದ ಆದೇಶದ ವಿರುದ್ಧ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ರಾಜ್ಯಗಳ ವಿದ್ಯಾರ್ಥಿಗಳು ಹಾಗೂ ರಾಜಕಾರಣಿಗಳು ಕೇಂದ್ರ ಸರಕಾರದ ನೀತಿಯ ವಿರುದ್ಧ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News