ತನ್ನ ಬ್ಯಾಂಕ್ ಖಾತೆಯಲ್ಲಿ 18 ಕೋ.ರೂ.ಹೊಂದಿದ್ದ ಸಣ್ಣವ್ಯಾಪಾರಿಗೆ ಐಟಿ ನೋಟೀಸ್
ವಿಜಯವಾಡಾ,ಜೂ.4: ಚಾಕ್ಲೇಟ್ಗಳನ್ನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳು ತ್ತಿರುವ ಇಲ್ಲಿಯ ಸಣ್ಣ ವ್ಯಾಪಾರಿಯೋರ್ವನ ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತನಿಖೆಗೊಳಪಡಿಸಿದ್ದಾರೆ. ನೋಟು ರದ್ದತಿಯನ್ನು ಘೋಷಿಸ ಲಾಗಿದ್ದ ಕಳೆದ ವರ್ಷದ ನವಂಬರ್ ತಿಂಗಳಿನಲ್ಲಿ ಈತನ ಬ್ಯಾಂಕ್ ಖಾತೆಯಲ್ಲಿ 18 ಕೋ.ರೂ.ಗಳ ನಗದು ವಹಿವಾಟು ನಡೆದಿರುವುದು ಪತ್ತೆಯಾಗಿದೆ.
ಕಿಶೋರಿ ಲಾಲ್ ಎಂಬಾತ ಈ ಸಣ್ಣ ವ್ಯಾಪಾರಿಯಾಗಿದ್ದು, ರೇಣುಕಾ ಮಾತಾ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಖಾತೆಗಳನ್ನು ಹೊಂದಿದ್ದಾನೆ.
ಆದಾಯ ತೆರಿಗೆ ಇಲಾಖೆಯು ತನಗೆ ಜಾರಿಗೊಳಿಸಿರುವ ನೋಟಿಸ್ನ್ನು ಕಂಡು ಆಘಾತಗೊಂಡಿರುವ ಲಾಲ್, ತಾನು ಅಮಾಯಕ ಮತ್ತು ತನ್ನ ಖಾತೆಯಲ್ಲಿ ನಡೆದಿರುವ ಈ ವಹಿವಾಟುಗಳ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾನೆ.
ಲಾಲ್ ಸಣ್ಣ ವ್ಯಾಪಾರಿಯಾಗಿರುವುದು ಹೌದು ಮತ್ತು ಆತನಿಗೆ ಇಷ್ಟೊಂದು ಭಾರೀ ಆದಾಯದ ಸಂಭಾವ್ಯ ಮೂಲಗಳು ಇಲ್ಲ ಮತ್ತು ಇಷ್ಟೊಂದು ಆದಾಯ ಹೊಂದಿರುವ ವ್ಯಕ್ತಿಗಳ ಸಂಪರ್ಕವೂ ಇಲ್ಲ ಎನ್ನುವುದು ಆದಾಯ ತೆರಿಗೆ ಇಲಾಖಾ ಅಧಿಕಾರಿಗಳ ತನಿಖೆಯಿಂದ ದೃಢಪಟ್ಟಿದೆ.