ಮಂಗಳೂರಿಗರಿಗೆ ಅನಂತ ಧನ್ಯವಾದಗಳು: ನಿರ್ಗಮನ ಕಮಿಷನರ್ ಚಂದ್ರಶೇಖರ್

Update: 2017-06-12 12:39 GMT

ಮಂಗಳೂರು, ಜೂ.12: ಕಳೆದ ಒಂದುವರೆ ವರ್ಷದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಕೆಲಸ ನಿರ್ವಹಿಸಲು ಮಾಧ್ಯಮ ಮಿತ್ರರ ಸಹಿತ ಅನೇಕ ಮಂದಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ್ದಾರೆ. ಕೆಲವು ಪ್ರಮುಖ ಪ್ರಕರಣಗಳನ್ನು ಬಯಲಿಗೆಳೆಯಲು ಮಾಧ್ಯಮ ಸಹಿತ ಸಾರ್ವಜನಿಕರ ಸಹಕಾರ ಅಪಾರ. ಹಾಗಾಗಿ ಮಂಗಳೂರಿಗರಿಗೆ ನನ್ನ ಅನಂತ ಧನ್ಯವಾದಗಳು ಎಂದು ನಿರ್ಗಮನ ಕಮಿಷನರ್ ಚಂದ್ರಶೇಖರ್ ಹೇಳಿದರು.

ಸೋಮವಾರ ಅಪರಾಹ್ನ ನೂತನ ಕಮಿಷನರ್‌ಗೆ ಅಧಿಕಾರ ಹಸ್ತಾಂತರಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನನಗೆ ಅಪರಿಚಿತ ನಗರವಾಗಿತ್ತು. ಇಲ್ಲಿ ಸೇವೆ ಸಲ್ಲಿಸಿರುವುದು ನನ್ನ ವೃತ್ತಿ ಜೀವನದ ಸ್ಮರಣೀಯ ಮತ್ತು ಸಂತೋಷದ ಸಂಗತಿಯಾಗಿದೆ. ಮನುಷ್ಯನದ ಜೀವನದಲ್ಲಿ ಕೂಡುವುದು ಆಕಸ್ಮಿಕ ಮತ್ತು ಅಗಲುವುದು ಅನಿವಾರ್ಯ. ಇನ್ಮುಂದೆ ನಾನು ಬೆಂಗಳೂರಿನ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಪೊಲೀಸ್ ಮಹಾನಿರೀಕ್ಷಕನಾಗಿ ವರ್ಗಾವಣೆಗೊಂಡಿದ್ದು, ನಿಮ್ಮ ಸಹಕಾರಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು.

ಮಂಗಳೂರು ನಗರ ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಪೊಲೀಸ್ ಇಲಾಖೆಯಾಗಿ ರೂಪಿಸಿದ ತೃಪ್ತಿ ಇದೆ. ಅದಕ್ಕಾಗಿ ‘ಫೋನ್ ಇನ್ ಕಾರ್ಯಕ್ರಮ’ವನ್ನು ಉತ್ತಮವಾಗಿ ಬಳಸಿಕೊಂಡೆ. ಉತ್ತಮ ಕೆಲಸ ಮಾಡಿದರೆ ಪ್ರೋತ್ಸಾಹ ಸಿಗುತ್ತದೆ ಎಂಬುದಕ್ಕೆ ಮಂಗಳೂರು ನಗರದ ಜನತೆ ಸಾಕ್ಷಿಯಾಗಿದೆ.

ಸಮಾಜ ಘಾತುಕ ಶಕ್ತಿಗಳು ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದಾಗ ವಾಸ್ತವ ಅರಿತುಕೊಂಡು ಬೆಂಬಲಿಸಿದ ಮಾಧ್ಯಮ ಮಿತ್ರರನ್ನು ಮರೆಯಲು ಅಸಾಧ್ಯ. ನಗರದ ಸಂಚಾರ ಸಮಸ್ಯೆ ಮತ್ತಿತರ ವಿಚಾರಕ್ಕೆ ಸಂಬಂಧಿಸಿ ಕಾಲಕಾಲಕ್ಕೆ ಸಲಹೆ, ಮಾರ್ಗದರ್ಶನ ನೀಡಿದ ಎಲ್ಲರನ್ನೂ ಈ ಸಂದರ್ಭ ಸ್ಮರಿಸುತ್ತೇನೆ ಎಂದರು.

ಡಿಸಿಪಿಗಳಾದ ಶಾಂತರಾಜು, ಹನುಮಂತರಾಯ ಮತ್ತಿತರ ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News