ಪ್ರವೇಶಾವಕಾಶ ನಿರಾಕರಿಸಿದ ಚೀನಾ: ಮಾನಸ ಸರೋವರ ಯಾತ್ರಾರ್ಥಿಗಳು ಸಂಕಷ್ಟದಲ್ಲಿ
ಹೊಸದಿಲ್ಲಿ, ಜೂ.23: ಮಾನಸಸರೋವರ ಯಾತ್ರಾರ್ಥಿಗಳು ಅಂತರಾಷ್ಟ್ರೀಯ ಗಡಿ ದಾಟಲು ಚೀನಾ ಅನುಮತಿ ನಿರಾಕರಿಸಿದ ಕಾರಣ ಯಾತ್ರಾರ್ಥಿಗಳ ಗುಂಪು ಭಾರತದ ಗಡಿಪ್ರದೇಶದಲ್ಲಿ ಇಕ್ಕಟ್ಟಿಗೆ ಸಿಲುಕಿದೆ.
ಚೀನಾದ ನಥು ಲ ಪ್ರದೇಶದ ಮೂಲಕ ಸಾಗುವ ಕೈಲಾಸ್- ಮಾನಸಸರೋವರ ಯಾತ್ರೆಗೆ ಅಡ್ಡಿಯುಂಟಾಗಿದೆ. ಈ ಕುರಿತು ಚೀನಾ ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ವಿದೇಶ ವ್ಯವಹಾರ ಸಚಿವಾಲಯ ತಿಳಿಸಿದೆ. ಚೀನಾದ ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವ ಸಾಧ್ಯತೆಯಿದ್ದು, ಬಹುಷಃ ಈ ಕಾರಣದಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಭಾರತದ ಸೇನೆಯ ಮೂಲಗಳು ತಿಳಿಸಿವೆ.
ಚೀನಾ ಅನುಮತಿ ನಿರಾಕರಿಸಿದ ಕಾರಣ ಜೂನ್ 20ರಿಂದ ಭಾರತದ ಗಡಿಭಾಗದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದ 47 ಯಾತ್ರಾರ್ಥಿಗಳು ಶುಕ್ರವಾರ(ಇಂದು) ಮಧ್ಯಾಹ್ನದ ವೇಳೆ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ಗೆ ಆಗಮಿಸಿದರು. ಪ್ರವೇಶಕ್ಕೆ ಅನುಮತಿ ನಿರಾಕರಿಸಲು ಕಾರಣವೇನು ಎಂಬುದನ್ನು ತಮಗೆ ತಿಳಿಸಿಲ್ಲ ಎಂದು ಯಾತ್ರಾರ್ಥಿಗಳು ಹೇಳಿದ್ದಾರೆ.
ಮೇ ತಿಂಗಳಿಂದ ಜುಲೈ ವರೆಗೆ ನಡೆಯುವ ಕೈಲಾಸ್ ಮಾನಸಸರೋವರ ಯಾತ್ರೆಯಲ್ಲಿ ಸುಮಾರು 40,000 ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಪಾಲ್ಗೊಳ್ಳುತ್ತಿದ್ದು ಇದರಲ್ಲಿ ಶೇ.80ರಷ್ಟು ಭಾರತೀಯರಾಗಿದ್ದಾರೆ.