ಬಿಜೆಪಿ ಸಂಸದನಿಗೆ ಟಿಎಂಸಿ ಕಾರ್ಯಾಕರ್ತರಿಂದ ಹಲ್ಲೆ

Update: 2017-06-24 15:12 GMT

ಕಲ್ನಾ, ಜೂ. 24: ಬಂಗಾಳದ ಬರ್ದ್ವಾನ್ ಜಿಲ್ಲೆಯ ಕಲ್ನಾ ಪಟ್ಟಣದಲ್ಲಿ ಇಂದು ತೃಣ ಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ದಾಳಿ ನಡೆಸಿದ ಪರಿಣಾಮ ಬಿಜೆಪಿ ಸಂಸದ ಜಾರ್ಜ್ ಬೇಕರ್ ಹಾಗೂ ಪಕ್ಷದ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಬೇಕರ್ ಬಿಜೆಪಿಯ ವಿಸ್ತಾರಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಲೋಕಸಭೆಗೆ ಬಿಜೆಪಿಯಿಂದ ನಾಮನಿರ್ದೇಶಿತ ಸದಸ್ಯ ಹಾಗೂ ನಟ ಬೇಕರ್ ಅವರ ಕಾರಿಗೆ ಟಿಎಂಸಿ ದಾಳಿಕೋರರು ಕಲ್ಲು ತೂರಿದರು. ಬಳಿಕ ಪೊಲೀಸರು ಬೇಕರ್ ಅವರನ್ನು ಕಾರಿನಿಂದ ಹೊರಗೆ ಕರೆದೊಯ್ದರು. ಕಲ್ನಾ ಪೊಲೀಸ್ ಠಾಣೆಯಲ್ಲಿ ಬೇಕರ್ ಪ್ರಕರಣ ದಾಖಲಿಸಿದ್ದಾರೆ.

 ದಾಳಿಯಲ್ಲಿ ಗಾಯಗೊಂಡ ಬೇಕರ್ ಹಾಗೂ ಇತರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಕರ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ. ಇತರರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಟಿಎಂಸಿ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತರಿಗೆ ಥಳಿಸಿದರು. ನಾನು ಕಾರಿನಿಂದ ಹೊರಗೆ ಇಳಿದಾಗ ನನ್ನ ಮೇಲೆ ದಾಳಿ ನಡೆಸಿದರು. ಓರ್ವ ದಾಳಿಕೋರ ನನ್ನ ತಲೆಗೆ ಹೊಡೆಯಲು ಪ್ರಯತ್ನಿಸಿದ. ಆದರೆ, ನಾನು ವಿರೋಧಿಸಿದೆ. ಕೆಲವರು ನನಗೆ ಹಿಂದಿನಿಂದ ಹೊಡೆದರು ಎಂದು ಬೇಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News