ನಡುಪದವು: ಮನೆಮಂದಿಯನ್ನು ಬೆದರಿಸಿ ನಗ-ನಗದು ದರೋಡೆ

Update: 2017-06-30 04:39 GMT

ಕೊಣಾಜೆ, ಜೂ.30: ಮನೆಯೊಂದರ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ವೃದ್ಧ ದಂಪತಿಯನ್ನು ಬೆದರಿಸಿ ಸುಮಾರು ಒಂದು ಲಕ್ಷ ವೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ಇಂದು ಮುಂಜಾನೆ ಕೊಣಾಜೆ ಗ್ರಾಮದ ನಡುಪದವಿನಲ್ಲಿ ನಡೆದಿದೆ.
ದಸ್ತಾವೇಜು ಬರಹಗಾರರಾಗಿರುವ ನಡುಪದವು ನಿವಾಸಿ ಸದಾಶಿವಯ್ಯ ಎಂಬವರ ಮನೆಯಿಂದ ಈ ದರೋಡೆ ನಡೆದಿದೆ. ಸುಮಾರು 30 ಸಾವಿರ ರೂ. ನಗದು ಹಾಗೂ 20 ಗ್ರಾಮ ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಮುಂಜಾನೆ 3 ಗಂಟೆ ಸುಮಾರಿಗೆ ಕಳ್ಳರು ಮನೆಯ ಕಾಂಪೌಂಡ್ ಹಾರಿ ಮನೆಯ ಆವರಣ ಪ್ರವೇಶಿಸಿದ್ದಾರೆ. ಬಳಿಕ ಮನೆಯೊಳಗಿದ್ದವರು ಹೊರಗಡೆ ಬರದಿರಲು ಮನೆಯ ಹಿಂಬಾಗಿಲ ಚಿಲಕವನ್ನು ಹೊರಗಡೆಯಿಂದ ಭದ್ರಪಡಿಸಿ ಮುಂಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಮನೆಯ ಕೋಣೆಯ ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳವುಗೈದಿದ್ದಾರೆ. ಈ ವೇಳೆ ಎಚ್ಚರಗೊಂಡ ಸದಾಶಿವಯ್ಯ ದಂಪತಿಯನ್ನು ಬೆದರಿಸಿದ ಕಳ್ಳರು ಸೂಟ್‌ಕೇಸ್‌ನಲ್ಲಿಟ್ಟಿದ್ದ ಚಿನ್ನಾಭರಣವನ್ನು ದರೋಡೆಗೈದು ಪರಾರಿಯಾಗಿದ್ದಾರೆನ್ನಲಾಗಿದೆ.
ಸದಾಶಿವಯ್ಯ ಅವರ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಎಸಿಪಿ ಶ್ರುತಿ ಭೇಟಿ ನೀಡಿದ್ದಾರೆ. ಘಟನೆಯ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News