ಗೋಭಕ್ಷಣೆ ಮಾಡುವವರು ಹಿಂದೂಗಳಲ್ಲ: ಮೋಹನ್ ಭಟ್

Update: 2017-06-30 09:29 GMT

ಉಡುಪಿ, ಜೂ.30: ಹಿಂದೂಗಳು ಗೋಭಕ್ಷಣೆ ಮಾಡುತ್ತಾರೆ ಎಂಬ ಪೇಜಾವರ ಸ್ವಾಮೀಜಿಯ ಹೇಳಿಕೆಯನ್ನು ನಾವು ಒಪ್ಪುದಿಲ್ಲ. ಗೋಭಕ್ಷಣೆ ಮಾಡುವವರು ಹಿಂದುಗಳಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗದ ಕಾರ್ಯದರ್ಶಿ ಮೋಹನ್ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆವರಣದಲ್ಲಿ ನಮಾಝ್ ಮಾಡಲು ಅವಕಾಶ ನೀಡಿರುವುದನ್ನು ವಿರೋಧಿಸಿ ಜು.2ರಂದು ಉಡುಪಿ ಕ್ಲಾಕ್ ಟವರ್‌ಎದುರು ಶ್ರೀಕೃಷ್ಣ ದೇವರಿಗೆ ಪ್ರಾರ್ಥಿಸಿ ಭಜನೆ ಮಾಡುವ ಮೂಲಕ ಮನಸ್ಸಿಗೆ ಆದ ನೋವನ್ನು ತೋರ್ಪಡಿಸಲಾಗುವುದು. ಮುಂದೆ ಇಂತಹ ಘಟನೆ ಮಠ ಮಂದಿರಗಳಲ್ಲಿ ನಡೆಯದಂತೆ ಹಾಗೂ ಪೇಜಾವರ ಶ್ರೀಗೆ ಶ್ರೀಕೃಷ್ಣ ಮುಖ್ಯಪ್ರಾಣ ದೇವರು ಪ್ರೇರಣೆ ನೀಡಲಿ ಎಂದು ಪ್ರಾರ್ಥಿಸಲಾಗುವುದು ಎಂದರು.

ಗೋಮೂತ್ರದಿಂದ ಶುದ್ಧೀಕರಿಸಿ
ಪೇಜಾವರ ಶ್ರೀಗಳ ನಡೆಯಿಂದ ಕೋಟ್ಯಂತರ ಹಿಂದೂಗಳ ಭಾವನಗೆ ನೋವಾಗಿದೆ. ಅವರು ಕೂಡಲೇ ಕ್ಷಮೆಯಾಚಿಸಬೇಕು. ಮುಸ್ಲಿಮರು ನಮಾಝ್ ಮಾಡುವ ಮೂಲಕ ಅಶುದ್ಧಿಯಾಗಿರುವ ಶ್ರೀಕೃಷ್ಣ ಮಠದ ಆವರಣವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಬೇಕು. ಇದಕ್ಕೆ ಸ್ಪಂದಿಸದಿದ್ದರೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ವಿಜಯ ಕುಮಾರ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ದಿನೇಶ್ ನಾಯ್ಕಿ, ಶ್ರೀರಾಮಸೇನೆಯ ಜಿಲ್ಲಾ ವಕ್ತಾರ ಜಯರಾಮ್ ಅಂಬೆಕಲ್ಲು, ಜಿಲ್ಲಾಧ್ಯಕ್ಷ ದಿನೇಶ್ ಪಾಂಗಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News