ವಿಶ್ರಾಂತ ಹಿಂದಿ ಶಿಕ್ಷಕರಿಗೆ ಗುರುನಮನ
ಮಂಗಳೂರು, ಜು.13: ‘ಅರಿವು ಕಲಿಸಿದ ಗುರು ವಯಸ್ಸಿನ ಕಾರಣದಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದಿದ್ದರೂ ಶಿಷ್ಯರ ಪಾಲಿಗೆ ಎಂದೂ ಲಘುವಾಗುವುದಿಲ್ಲ.ಅಕ್ಷರವೊಂದನ್ನು ಕಲಿಸಿದಾತನೂ ಗುರುವೆ. ಅಂತಹವರನ್ನು ಗೌರವಿಸುವುದರಿಂದ ಜೀವನದಲ್ಲಿ ಉತ್ಕರ್ಷ ಸಾಧ್ಯ’ ಎಂದು ಯಕ್ಷಗಾನ ಅರ್ಥಧಾರಿ ಮತ್ತು ಪ್ರಾಧ್ಯಾಪಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಪ್ರಶಸ್ತಿ ವಿಜೇತ ತಾರಸಿ ಕೃಷಿಕ ಪಡ್ಡಂಬೈಲ್ ಕೃಷ್ಣಪ್ಪಗೌಡರು ನಿವೃತ್ತ ಹಿಂದಿ ಶಿಕ್ಷಕ ಬಿ.ರಾಮಕೃಷ್ಣರಿಗೆ ಏರ್ಪಡಿಸಿದ ಗುರುನಮನ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.
ಮೂಲತಃ ಬೇಕಲದವರಾದ ರಾಮಕೃಷ್ಣರು ಅಜ್ಜಾವರ, ಅಮೈ-ಮಡಿಯಾರ್, ಉಚ್ಚಿಲಗುಡ್ಡೆ ಮೊದಲಾದೆಡೆ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇದೀಗ ಕೊಂಡಾಣ ಕೈಕಂಬದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದು, ಅಪಾರ ಶಿಷ್ಯವಾತ್ಸಲ್ಯ ಹೊಂದಿರುವ ಅಪರೂಪದ ಶಿಕ್ಷಕ’ಎಂದು ಕುಕ್ಕುವಳ್ಳಿ ಬಣ್ಣಿಸಿದರು.
ಈ ಸಂದರ್ಭ ಎಚ್.ಕಲಾವತಿ ರಾಮಕೃಷ್ಣ ಅವರನ್ನೂ ಸನ್ಮಾನಿಸಲಾಯಿತು. ರಂಗನಟಿ ಜಯಶೀಲ, ಕವಿ ಲಕ್ಷ್ಮೀನಾರಾಯಣ ರೈ ಹರೇಕಳ, ಮಾಧವ ಬೇಕಲ್, ಜೀವನ್ ಬಿ.ಆರ್., ಆಮೋದ್ ಕುಮಾರ್, ಅಶ್ವಿತಾ ಎಚ್., ಗಹನ ಉಪಸ್ಥಿತರಿದ್ದರು. ಪಡ್ಡಂಬೈಲ್ ಕೃಷ್ಣಪ್ಪಗೌಡ ಸ್ವಾಗತಿಸಿದರು. ಮೀನಾಕ್ಷಿ ಕೆ. ಗೌಡ ವಂದಿಸಿದರು.