'ಜಿನ್ನಾ ಚಿತ್ರದ ಬಸ್'ಗೆ ಬೆಂಕಿ ಹಚ್ಚಿ, ಬಸ್ ಮಾಲಕನನ್ನು ಕೊಲ್ಲಹೊರಟ ಸಂಘಪರಿವಾರದ ಮಂದಿ!
ಬೆಂಗಳೂರು, ಜು.14: ಮುಹಮ್ಮದ್ ಅಲಿ ಜಿನ್ನಾ ಚಿತ್ರ ಅಂಟಿಸಿರುವ ಬಸ್ಸೊಂದು ಬೆಂಗಳೂರು ನಗರದಲ್ಲಿ ಓಡಾಡುತ್ತಿದೆ ಎನ್ನುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ನಮೋ ಬ್ರಿಗೇಡ್ ನ ನೀರಜ್ ಕಾಮತ್ ಎಂಬವನು ಟ್ವಿಟ್ಟರ್ ನಲ್ಲಿ ಪೋಸ್ಟೊಂದನ್ನು ಮಾಡಿದ್ದು, 1000ಕ್ಕೂ ಹೆಚ್ಚು ಶೇರ್ ಆಗಿತ್ತು. ಇಷ್ಟೇ ಅಲ್ಲದೆ ಪೋಸ್ಟ್ ಕಾರ್ಡ್ ನ್ಯೂಸ್ ನ ಅಭಿಷೇಕ್ ಸಿಂಗ್ ಎಂಬಾತ, "ಇದರ ವಿರುದ್ಧ ನಿಮ್ಮಲ್ಲಿ ಎಷ್ಟು ಮಂದಿ ಹೋರಾಟ ನಡೆಸುತ್ತೀರಿ. ಈ ಬಸ್ ಮಾಲಕನನ್ನು ಇರಿದು ಕೊಂದು ಬಸ್ಸನ್ನು ಹೊತ್ತಿಸುವ ಪ್ರತಿಜ್ಞೆಯನ್ನು ಎಷ್ಟು ಮಂದಿ ಮಾಡುತ್ತೀರಿ” ಎಂದು ಪ್ರಶ್ನಿಸಿ ಪ್ರಚೋದಿಸಿದ್ದ.
ಆದರೆ ಈ ಸುದ್ದಿಯ ಹಿಂದಿನ ಅಸಲಿಯತ್ತನ್ನು ಆಲ್ಟ್ ನ್ಯೂಸ್ (altnews.in) ಬಹಿರಂಗಪಡಿಸಿದೆ.
ಈ ಫೋಟೊ ವೈರಲ್ ಆಗುತ್ತಿದ್ದಂತೆ ಸಂಘಪರಿವಾರದ ಮಂದಿ ಈ ಸುದ್ದಿಯ ಹಿಂದಿನ ಸತ್ಯಾಸತ್ಯತೆಯನ್ನೂ ಅರಿಯುವ ಗೋಜಿಗೆ ಹೋಗದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸತೊಡಗಿದರು. ನಂತರ ಈ ಸುದ್ದಿಯನ್ನು ಸಂಘಪರಿವಾರದ ಹಲವು ವೆಬ್ ಸೈಟ್ ಗಳು ಪ್ರಕಟಿಸಿದವು.
ವಾಸ್ತವವೇನು?:
ಬೆಂಗಳೂರಿನಲ್ಲಿ ಓಡಾಡಿದ ಈ ಬಸ್ ಮಲಯಾಳಂ ಚಲನಚಿತ್ರ “ಆಭಾಸಂ”ನ ಚಿತ್ರೀಕರಣಕ್ಕಾಗಿ ಬಳಸಲಾಗಿತ್ತು. ಈ ಚಿತ್ರದ ಚಿತ್ರೀಕರಣ ನಗರದಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿನ್ನಾ ಚಿತ್ರವಿರುವ ಬಸ್ ನಗರದ ರಸ್ತೆಗಳಲ್ಲಿ ಓಡಾಡಿತ್ತು. ಈ ಬಗ್ಗೆ ಆಲ್ಟ್ ನ್ಯೂಸ್ (altnews.in) ಚಿತ್ರತಂಡದ ಜೊತೆ ಮಾತನಾಡಿದ್ದು, ಚಿತ್ರತಂಡ ಕೂಡ ಇದನ್ನು ಸ್ಪಷ್ಟಪಡಿಸಿದೆ.
ಆದರೆ ಒಂದು ವಿಷಯದ ಸತ್ಯಾಸತ್ಯತೆಯನ್ನೂ ಅರಿಯದ ದುಷ್ಕರ್ಮಿಗಳು ಕೊಲ್ಲುವ, ಬೆಂಕಿ ಹಚ್ಚುವ, ಪ್ರತಿಭಟಿಸುವ ಅಪಾಯಕಾರಿ ಚಟುವಟಿಕೆಗಳಿಗೆ ಅಮಾಯಕರನ್ನು ಪ್ರೇರೇಪಿಸುವುದು ವಿಪರ್ಯಾಸವೇ ಸರಿ.
Bus With Muhammad Ali Jinnah's Photo In Bengaluru @CPBlr @narendramodi @HMOIndia @CMofKarnataka @KirenRijiju @PTI_News @republic @TimesNow pic.twitter.com/gAYPE8naEq
— Neeraj Kamath C (@kamathneeraj) 13 July 2017