ಮದುವೆಯಾಗುವುದಾಗಿ ವಂಚನೆ: ವಿವಾಹಿತ ಸೆರೆ
ವೇಣೂರು, ಜು. 25: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲದ ವಿಟ್ಲಪಡ್ನೂರು ಗ್ರಾಮದ ಹರೀಶ್ ಕೆ. ಆಚಾರಿ (29) ಎಂಬಾತನನ್ನು ವೇಣೂರು ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಯುವತಿಯ ಗೆಳೆತನ ಬೆಳೆಸಿ, ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ದೂರಲಾಗಿದೆ. ಈತನಿಗೆ ಮದುವೆಯಾಗಿ ಒಂದು ಮಗುವಿರುವ ವಿಚಾರ ನಂತರ ಬೆಳಕಿಗೆ ಬಂದಿದೆ. ಪತ್ನಿಗೆ ವಿಚ್ಚೇದನ ನೀಡಿ ಮದುವೆಯಾಗುವುದಾಗಿ ನಂಬಿಸಿದ ಹರೀಶ್ ಆಚಾರಿ ಈಕೆಯಿಂದ ಚಿನ್ನದ ಸರ, 2 ಉಂಗುರವನ್ನು ಅಡವಿರಿಸುವ ಸಲುವಾಗಿ ಪಡೆದಿದ್ದಾನೆ ಎಂದು ತಿಳಿದುಬಂದಿದೆ. ನಂತರ ಮದುವೆ ವಿಚಾರದಲ್ಲಿ ಮಾತುಕತೆ ನಡೆಸಿದರೆ ಆಸಿಡ್ ಹಾಕಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿದ್ದಾನೆಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹರೀಶ್ ಆಚಾರಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.