ಪ.ಬಂಗಾಳ: ಓರ್ವ ಕಾಂಗ್ರೆಸ್,ಐವರು ಟಿಎಂಸಿ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧ ಆಯ್ಕೆ
Update: 2017-07-31 17:02 GMT
ಕೋಲ್ಕತಾ,ಜು.31: ಸಿಪಿಎಂ ಅಭ್ಯರ್ಥಿ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರ ನಾಮಪತ್ರವು ತಾಂತ್ರಿಕ ಕಾರಣಗಳಿಂದ ರದ್ದುಗೊಂಡ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಿಂದ ಐವರು ತೃಣಮೂಲ ಕಾಂಗ್ರೆಸ್(ಟಿಎಂಸಿ) ಮತ್ತು ಓರ್ವ ಕಾಂಗ್ರೆಸ್ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾನಸ್ ಭುನಿಯಾ, ಪಕ್ಷದ ರಾಷ್ಟ್ರೀಯ ವಕ್ತಾರ ಡೆರೆಕ್ ಒ'ಬ್ರಿಯೆನ್, ಸುಖೇಂದು ಶೇಖರ್ ರಾಯ್, ಡೋಲಾ ಸೇನ್ ಮತ್ತು ಸಾಂತಾ ಛೆತ್ರಿ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವ ಟಿಎಂಸಿ ಅಭ್ಯರ್ಥಿಗಳಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಭಟ್ಟಾಚಾರ್ಯ ಅವರೂ ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಾರೆ.
ಭಟ್ಟಾಚಾರ್ಯ, ರಾಯ್, ಒ'ಬ್ರಿಯೆನ್ ಮತ್ತು ಸೇನ್ ತಮ್ಮ ಪಕ್ಷಗಳಿಂದ ಮರು ನಾಮಕರಣಗೊಂಡಿದ್ದರೆ, ಭುನಿಯಾ ಮತ್ತು ಛೆತ್ರಿ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.