ನೆಲ್ಯಾಡಿ: ಅಬಕಾರಿ ಇಲಾಖೆ ವಿರುದ್ಧ ನಾಗರಿಕರ ಬೃಹತ್ ಪ್ರತಿಭಟನೆ

Update: 2017-08-02 05:27 GMT

ಉಪ್ಪಿನಂಗಡಿ, ಆ.2: ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ನೆಲ್ಯಾಡಿಯಲ್ಲಿ ಮದ್ಯದಂಗಡಿಯೊಂದಕ್ಕೆ ಪರವಾನಿಗೆ ನೀಡಿರುವ ಅಬಕಾರಿ ಇಲಾಖೆಯ ವಿರುದ್ಧ ನೆಲ್ಯಾಡಿಯಲ್ಲಿಂದು ಬೆಳಗ್ಗೆ ಬೃಹತ್ ಪ್ರತಿಭಟನೆ ನಡೆಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೆಲ್ಯಾಡಿ ವಲಯ, ನೆಲ್ಯಾಡಿ-ಕೌಕ್ರಾಡಿ ಗ್ರಾಮಗಳ ಎಲ್ಲ ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಂಘಟನೆಗಳು ಮತ್ತು ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಸಂಘಟಿಸಲಾಗಿರುವ ಈ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ 220 ಮೀಟರ್ ಅಂತರದಲ್ಲಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಈ ನೆಲ್ಯಾಡಿಯಲ್ಲಿ ಸದ್ಯ ರಾಷ್ಟ್ರೀಯ ಹೆದ್ದಾರಿಗಿಂತ ಕೇವಲ 10 ಮೀಟರ್ ಅಂತರದಲ್ಲಿ ಕಾರ್ಯಾಚರಿಸುತ್ತಿದ್ದರೂ ಮದ್ಯದಂಗಡಿಯೊಂದಕ್ಕೆ ಅಬಕಾರಿ ಇಲಾಖೆ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿದೆ.

ಸದ್ಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಮದ್ಯದಂಗಡಿಗೆ ಹಿಂಬಾಗಿಲ ಮೂಲಕ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಪರವಾನಿಗೆ ನೀಡಿದೆ. ಮದ್ಯದಂಗಡಿಯನ್ನು ಹಿಂಬಾಗಿಲ ಮೂಲಕ ಸಂಪರ್ಕಿಸುವ ದಾರಿಯು ಧಾರ್ಮಿಕ ಕೇಂದ್ರಗಳನ್ನು ಹಾಗೂ ಜನವಸತಿ ಪ್ರದೇಶವನ್ನು ಹೊಂದಿದೆ. ಇದರಿಂದ ಮದ್ಯಪಾನಿಗಳಿಂದಾಗಿ ತೊಂದರೆಯಾಗುತ್ತಿರುವುದರಿಂದ ಮದ್ಯದಂಗಡಿಯನ್ನು ಕೂಡಲೇ ಮುಚ್ಚಲು ಕ್ರಮ ಕೈಗೊಳ್ಳುವಂತೆ ನೆಲ್ಯಾಡಿ ನಾಗರಿಕರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News