ಸಕಾಲದಲ್ಲಿ ದೊರೆಯದ ಪಹಣಿ ಪತ್ರ: ತಪ್ಪದ ರೆತರ ಪರದಾಟ

Update: 2017-08-03 17:49 GMT

ಶಿವಮೊಗ್ಗ, ಆ.3: ರೈತರಿಗೆ ಸುಲಭ ಮತ್ತು ತ್ವರಿತಗತಿಯಲ್ಲಿ ರೈತರಿಗೆ ಪಹಣಿ ಪತ್ರ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಆನ್‌ಲೈನ್ ಸೇರಿದಂತೆ ವಿವಿಧ ವಿಭಾಗಗಳ ಮೂಲಕ ಪಹಣಿ ಪತ್ರ ವಿತರಿಸಲು ಕ್ರಮಕೈಗೊಂಡಿದೆ. ಆದರೆ, ಸಂಬಂಧಿಸಿದ ಕೇಂದ್ರಗಳಲ್ಲಿ ಸರ್ವರ್ ತೊಂದರೆ, ಇಂಟರ್ನೆಟ್ ಸಂಪರ್ಕ ಅಲಭ್ಯತೆ ಮತ್ತೀತರ ತಾಂತ್ರಿಕ ಕಾರಣಗಳಿಂದ ಪಹಣಿ ಪತ್ರ ಪಡೆಯಲು ರೈತರು ಪರದಾಡುವ ಸ್ಥಿತಿ ಮುಂದುವರಿದಿದ್ದು, ತಾಲೂಕು ಕಚೇರಿಗಳಿಗೆ ಎಡತಾಕುವಂತಾಗಿದೆ.

ಈ ನಡುವೆಯೇ ಗ್ರಾಮ ಪಂಚಾಯತ್‌ಗಳಲ್ಲಿ ಪಹಣಿ ಪತ್ರ ನೀಡುವಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ಪರಿಣಾಮಕಾರಿಯಾಗಿ ಕಾರ್ಯಗತವಾಗಿಲ್ಲ. ರಾಜ್ಯದ ಹಲವು ಗ್ರಾಪಂಗಳಲ್ಲಿ ಪಹಣಿ ಪತ್ರ ನೀಡಲು ನಿರಾಕರಣೆ ಮಾಡಲಾಗುತ್ತಿದೆ. ಹಾಗೆಯೇ ಗ್ರಾಪಂಗಳಲ್ಲಿ ಪಹಣಿ ಪತ್ರ ಲಭ್ಯವಾಗಲಿದೆ ಎಂಬ ಮಾಹಿತಿಯೇ ಬಹುತೇಕ ರೈತರಿಗೆ ತಿಳಿದಿಲ್ಲವಾಗಿದೆ. ಇದರಿಂದ ರೈತರು ಹೋಬಳಿ ಕೇಂದ್ರಗಳಲ್ಲಿರುವ ನಾಡ ಕಚೇರಿ, ತಾಲೂಕು ಕೇಂದ್ರದಲ್ಲಿರುವ ತಹಶೀಲ್ದಾರ್ ಕಚೇರಿಗಳಿಗೆ ಅಂಡಲೆಯುವಂತಾಗಿದೆ.

ಸರಕಾರದ ಆದೇಶ ಪಾಲನೆಯಾಗುತ್ತಿಲ್ಲ: ಸರಕಾರದ ಆದೇಶದಂತೆ ಬಹುತೇಕ ಗ್ರಾಪಂಗಳ ಪಿಡಿಒಗಳು ಪಹಣಿ ಪತ್ರ ವಿತರಣೆಗೆ ಕ್ರಮಕೈಗೊಳ್ಳುತ್ತಿಲ್ಲ. ಸರ್ವರ್ ಡೌನ್, ಅಂತರ್ಜಾಲ ಸಂಪರ್ಕ ಅಸಮರ್ಪಕತೆ ಇತರ ತಾಂತ್ರಿಕ ನೆಪವೊಡ್ಡಿ ಪಹಣಿ ಕೇಳಿಕೊಂಡು ಬರುವ ರೈತರನ್ನು ಸಾಗ ಹಾಕುತ್ತಿರುವ ಆರೋಪಗಳು ರೈತ ಸಮುದಾಯದಿಂದ ಕೇಳಿಬರುತ್ತಿವೆ.

ಗ್ರಾಪಂನಲ್ಲಿ ಕಂಪ್ಯೂಟರ್, ಆನ್‌ಲೈನ್ ಆಧಾರಿತ ಇತರ ಕೆಲಸ ಕಾರ್ಯಗಳ ನಿರ್ವಹಣೆಗೆ ಸರ್ವರ್ ಡೌನ್ ಆಗಲಿ, ಅಂತರ್ಜಾಲ ಸಂಪರ್ಕ ಕೊರತೆಯಾಗಲಿ ಇರುವುದಿಲ್ಲ. ಆದರೆ, ಪಹಣಿ ಪತ್ರದ ದಾಖಲೆ ನೀಡುವ ವೇಳೆ ಮಾತ್ರ ತಾಂತ್ರಿಕ ತೊಂದರೆ ಎದುರಾಗುತ್ತದೆ’ ಎಂದು ರೈತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಚೇರಿಗಳ ಮುಂಭಾಗ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇಲ್ಲವೇ ಒಂದೆರೆಡು ದಿನಗಳ ಕಾಲ ಕಚೇರಿಗಳಿಗೆ ಎಡತಾಕಬೇಕಾಗುತ್ತದೆ. ಕೇಂದ್ರದವರು ಸರ್ವರ್ ಡೌನ್ ಎಂಬ ಕಾರಣ ನೀಡುತ್ತಾರೆ. ಪಹಣಿ ಪತ್ರಗಳಿಗಾಗಿ ರೈತರು ಕಚೇರಿಗಳಿಗೆ ಅಲೆದಾಡುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಕ್ರಮವಾಗಿದೆ ಎಂಬುವುದನ್ನು ಆಡಳಿತಗಾರರೇ ಹೇಳಬೇಕಾಗಿದೆ ಎಂದು ಕೆಲ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಜಿಲ್ಲಾಡಳಿತಗಳು ರೈತರಿಗೆ ಸಕಾಲದಲ್ಲಿ ಪಹಣಿ ಪತ್ರ ದೊರಕುವ ವ್ಯವಸ್ಥೆ ಮಾಡಬೇಕು. ಗ್ರಾ.ಪಂ.ಗಳಲ್ಲಿಯೂ ಪಹಣಿ ದೊರಕಿಸಿ ಕೊಡಲು ಮುಂದಾಗುವ ಮೂಲಕ ರೈತರಿಗೆ ಸಹಕಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸುತ್ತಾರೆ.

ಸಕಾಲದಲ್ಲಿ ರೈತರಿಗೆ ಪಹಣಿ ಪತ್ರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕೆಲವೊಮ್ಮೆ ಸರ್ವರ್ ಡೌನ್, ಅಂತರ್ಜಾಲ ಸಮಸ್ಯೆಯಿಂದ ಪಹಣಿ ನೀಡುವಲ್ಲಿ ವಿಳಂಬವಾದಾಗ ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸಿ, ರೈತರಿಗೆ ಪಹಣಿ ಪತ್ರ ವಿತರಣೆ ಮಾಡಲಾಗುತ್ತಿದೆ. ಪಹಣಿ ವಿತರಣೆಯಲ್ಲಿ ಏನಾದರೂ ವಿಳಂಬವಾದರೆ, ರೈತರು ನನ್ನನ್ನು ಸಂಪರ್ಕಿಸಿ ಮಾಹಿತಿ ನೀಡಿದರೆ, ತುರ್ತುಗತಿಯಲ್ಲಿ ಕ್ರಮ ಕೈಗೊಂಡು ಪರಿಹಾರ ಕಲ್ಪಿಸಿಕೊಡಲಾಗುವುದು.

-ಸತ್ಯನಾರಾಯಣ್, ತಹಶೀಲ್ದಾರ್

ಸರಕಾರದ ಆದೇಶ

‘ಪಂಚಾಯತ್-100’ ಬಾಪೂಜಿ ಸೇವಾ ಕೇಂದ್ರ ಯೋಜನೆಯಡಿ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿಯೂ ಪಹಣಿ ಪತ್ರಗಳನ್ನು ರೈತರಿಗೆ ವಿತರಣೆ ಮಾಡುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬೆಳೆ ದೃಢೀಕರಣ, ಬೆಳೆ ಪರಿಹಾರ ಪಡೆಯಲು, ಬೆಳೆ ವಿಮೆ, ಸಾಲ ಸೌಲಭ್ಯ ಸೇರಿದಂತೆ ಮತ್ತೀತರ ಕೆಲಸ ಕಾರ್ಯಗಳಿಗೆ ರೈತರು ಚಾಲ್ತಿಯಲ್ಲಿರುವ ಪಹಣಿ ಪತ್ರವನ್ನು ಸಂಬಂಧಿಸಿದ ಇಲಾಖೆಗಳಿಗೆ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಗ್ರಾಪಂ ಕಚೇರಿಗಳಲ್ಲಿಯೇ ಪಿಡಿಒಗಳ ಮೂಲಕ ಪಹಣಿ ಪತ್ರ ನೀಡುವ ವ್ಯವಸ್ಥೆಗೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ.

ಪಹಣಿಗೆ 1 ರೂ. ಶುಲ್ಕ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದೆ. ಸಂಗ್ರಹಿಸಿದ ಶುಲ್ಕವನ್ನು ನಿಯಮಾನುಸಾರ ಜಿಲ್ಲಾಧಿಕಾರಿ ಭೂಮಿ ಪಿ.ಡಿ. ಖಾತೆೆಗೆ ಜಮಾ ಮಾಡುವಂತೆಯೂ ಸರಕಾರ ಪಿಡಿಒಗಳಿಗೆ ಸೂಚನೆ ನೀಡಿದೆ.

Writer - -ಬಿ.ರೇಣುಕೇಶ್

contributor

Editor - -ಬಿ.ರೇಣುಕೇಶ್

contributor

Similar News