1857ರ ಸಂಗ್ರಾಮದಲ್ಲಿ ಭಾಗವಹಿಸಿದ್ದ ಉಪೇಂದ್ರ ಕಾಮತ್
ಸ್ವಾತಂತ್ರ್ಯ ಹೋರಾಟದ ಹಿರಿಮೆಯನ್ನು ಹೆಚ್ಚು ಹೇಳಿಕೊ ಳ್ಳದ ಬೆಳ್ತಂಗಡಿಯಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪುಗಳು ಮೆಲುಕುಹಾಕುವಂತಹ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ವೊಂದಿದೆ. ಆದರೆ ಈ ಐತಿಹಾಸಿಕ ಸ್ಮಾರಕ ಎಲ್ಲರ ಉಪೇಕ್ಷೆಗೆ ಪಾತ್ರ ವಾಗಿದ್ದು ಬೆಳ್ತಂಗಡಿಯ ಜನರಿಗೇ ಇದರ ಪರಿಚಯವಿಲ್ಲ ವಾಗಿದೆ ಎಂಬುದು ಬೇಸರದ ವಿಷಯ.
ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಈ ಸ್ಮಾರಕವಿದೆ. 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಶತಮನೋತ್ಸವದ ಸವಿನೆನಪಿಗಾಗಿ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಬೆಳ್ತಂಗಡಿಯ ಕಾಂತಾವರ ಉಪೇಂದ್ರ ಕಾಮತ್ ಸ್ಮಾರಕವನ್ನು 1957ರಲ್ಲಿ ಸ್ಥಾಪಿಸಲಾಗಿತ್ತು. 1957ರ ಸ್ವಾತಂತ್ರ್ಯ ದಿನಾಚರಣೆಯ ದಿನವೇ ಸ್ಮಾರಕ ಸಮಭ್ರಮದಿಂದ ಉದ್ಘಾಟನೆಗೊಂಡಿತ್ತು. ಉಪೇಂದ್ರ ಕಾಮತ್ ಅವರ ಕುಟುಂಬಸ್ಥರಾದ ಗಾಂಧಿವಾದಿ ಕೆ.ಪುಂಡಲೀಕ ಕಾಮತ್ ಅವರ ನೇತೃತ್ವದಲ್ಲಿ ಈ ಸ್ಮಾರಕ ನಿರ್ಮಾಣಗೊಂಡಿತ್ತು. ಅರ್ಧ ಶತಮಾನದ ಹಿಂದೆ ಸ್ಥಾಪನೆಯಾದ ಒಂದುವರೆ ಶತಮಾನದ ಹಿಂದಿನ ಕತೆಯನ್ನು ಹೇಳುವ ಇಂತಹ ಒಂದು ಅಪರೂಪದ ಸ್ಮಾರಕ ಬೆಳ್ತಂಗಡಿಯಲ್ಲಿ ಇರುವ ಬಗ್ಗೆ ಅವರ ಕುಟುಂಬಸ್ಥರ ಹೊರತಾಗಿ ಯಾರಿಗೂ ಮಾಹಿತಿಯೇ ಇಲ್ಲವಾಗಿದೆ. ಮೊದಲೆಲ್ಲ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಇಲ್ಲಿ ಪುಷ್ಪಾರ್ಚನೆ ಮಾಡಲಾಗುತ್ತಿತ್ತು ಆದರೆ ಕ್ರಮೇಣ ಅದು ನಿಂತುಹೋಗಿದೆ.