30 ದಿನಗಳಲ್ಲಿ 52 ಶಿಶುಗಳ ಸಾವು: ಜಾರ್ಖಂಡ್ ಸರಕಾರಕ್ಕೆ ಎನ್ಎಚ್ಆರ್ಸಿ ನೋಟಿಸ್
ಹೊಸದಿಲ್ಲಿ,ಆ.28: ಜಂಷೆಡ್ಪುರದ ಮಹಾತ್ಮಾ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 30 ದಿನಗಳ ಅವಧಿಯಲ್ಲಿ 52 ಶಿಶುಗಳ ಸಾವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ಸಿ)ವು ಜಾರ್ಖಂಡ್ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.
ಈ ಬಗ್ಗೆ ಮಾಧ್ಯಮ ವರದಿಗಳನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿರುವ ಆಯೋಗವು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಕ್ಕಳ ಸಾವು ಕಳವಳದ ವಿಷಯ ವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪೌಷ್ಟಿಕತೆ ಮಕ್ಕಳ ಸಾವುಗಳಿಗೆ ಕಾರಣ ಎನ್ನುವ ಮಾಹಿತಿ ತನಗೆ ಲಭಿಸಿದೆ ಎಂದಿರುವ ಆಯೋಗವು, ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿಗೆ ನೋಟಿಸಿನಲ್ಲಿ ಸೂಚಿಸಿದೆ.
ದೇಶದ ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ನಿರ್ಲಕ್ಷದಿಂದ ಇಂತಹ ದುರಂತ ಸಾವುಗಳು ಸಂಭವಿಸದಂತಿರಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಕ್ತ ನಿರ್ದೇಶಗಳನ್ನು ನೀಡುವ ಮೂಲಕ ತಕ್ಷಣದ ಕ್ರಮವನ್ನು ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೂ ಆಯೋಗವು ಸೂಚಿಸಿದೆ.