ಹಲ್ಲೆ ಪ್ರಕರಣ: ಹಾರ್ದಿಕ್ ಪಟೇಲ್ಗೆ ಪೊಲೀಸ್ ಕಸ್ಟಡಿ
ಅಹ್ಮದಾಬಾದ್, ಆ.30: ಹಲ್ಲೆ ಹಾಗೂ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿ ಹಾರ್ದಿಕ್ ಪಟೇಲ್ ಹಾಗೂ ಅವರ ನಿಕಟವರ್ತಿ ದಿನೇಶ್ ಬಂಭಾನಿಯಗೆ ಗುಜರಾತ್ನ ಪಟಾನ್ ಜಿಲ್ಲಾ ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿ ವಿಧಿಸಿದೆ.
ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಹಾರ್ದಿಕ್ ಪಟೇಲ್ , ಬಂಭಾನಿಯ ಹಾಗೂ ಇತರ ಸುಮಾರು 7 ಮಂದಿಯ ವಿರುದ್ಧ ನರೇಂದ್ರ ಪಟೇಲ್ ಎಂಬಾತ ರವಿವಾರ ನೀಡಿದ ದೂರಿನನ್ವಯ ಸೋಮವಾರ ಇವರನ್ನು ಪೊಲೀಸರು ಬಂಧಿಸಿದ್ದರು.
ನರೇಂದ್ರ ಪಟೇಲ್ ಕೂಡಾ ‘ಪಟೇಲ್ ಆಂದೋಲನ’ದ ಓರ್ವ ಕಾರ್ಯಕರ್ತ. ರವಿವಾರ ಪಟಾನ್ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯ ಕುರಿತು ಚರ್ಚಿಸಲು ತಾನು ಸ್ನೇಹಿತನೊಡನೆ ಹಾರ್ದಿಕ್ ಮತ್ತು ಬಂಭಾನಿಯ ಉಳಿದುಕೊಂಡಿದ್ದ ಹೋಟೆಲ್ಗೆ ತೆರಳಿದ್ದಾಗ ಅಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಫೋನನ್ನು ಜಖಂಗೊಳಿಸಲಾಗಿದೆ. ಅಲ್ಲದೆ ತನ್ನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ ಎಂದು ನರೇಂದ್ರ ಪಟೇಲ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿತ್ತು.
ಈ ಘಟನೆಯ ಬಳಿಕವೂ ತಾವು ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳಿದಾಗ , ಬಂಭನಿಯ ತಮ್ಮನ್ನು ವೇದಿಕೆಯ ಹಿಂಭಾಗಕ್ಕೆ ಕರೆದೊಯ್ದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.