ರೋಹಿಂಗ್ಯರ ಗಡೀಪಾರು: ಭಾರತದ ಕ್ರಮಕ್ಕೆ ವಿಶ್ವಸಂಸ್ಥೆಯ ಆಕ್ಷೇಪ

Update: 2017-09-11 14:35 GMT

ಜಿನೇವ, ಸೆ.11: ರೋಹಿಂಗ್ಯ ಮುಸ್ಲಿಮರನ್ನು ಗಡೀಪಾರು ನಡೆಸುವ ಭಾರತದ ಕ್ರಮಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕು ವಿಭಾಗದ ಆಕ್ಷೇಪ ಸೂಚಿಸಿದೆ. ರೋಹಿಂಗ್ಯ ಮುಸ್ಲಿಮರನ್ನು ಸಾಮೂಹಿಕವಾಗಿ ಗಡೀಪಾರು ನಡೆಸುವ ಅಥವಾ ಅವರ ಜೀವಕ್ಕೆ ಅಪಾಯವಿರುವ ಯಾವುದೇ ಸ್ಥಳಕ್ಕೆ ಅವರನ್ನು ಮರಳಿಸುವ ಯತ್ನವನ್ನು ಭಾರತ ಕೈಗೊಳ್ಳುವಂತಿಲ್ಲ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯ ಮುಸ್ಲಿಮರ ವಿರುದ್ಧ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡಲು ಭಾರತ ಕೈಗೊಂಡಿರುವ ಕ್ರಮದಿಂದ ವ್ಯಥೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕು ವಿಭಾಗದ ಹೈ ಕಮಿಶನರ್ ಝೈದ್ ಆಲ್ ಹುಸೈನ್ ತಿಳಿಸಿದ್ದಾರೆ. ಭಾರತದಲ್ಲಿ ಸುಮಾರು 40,000 ರೋಹಿಂಗ್ಯನ್ನರು ನೆಲೆಸಿದ್ದು ಅವರಲ್ಲಿ 16,000 ಮಂದಿ ನಿರಾಶ್ರಿತರ ಗುರುತು ಕಾರ್ಡ್ ಪಡೆದಿದ್ದಾರೆ ಎಂದವರು ತಿಳಿಸಿದ್ದಾರೆ.

ನಿರಾಶ್ರಿತರ ಕುರಿತಾದ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲದ ಕಾರಣ ಈ ವಿಷಯದ ಬಗ್ಗೆ ಇರುವ ಅಂತಾರಾಷ್ಟ್ರೀಯ ಕಾನೂನಿನಿಂದ ಭಾರತಕ್ಕೆ ವಿನಾಯಿತಿ ಇದೆ ಎಂದು ಭಾರತದ ಗೃಹ ಸಚಿವಾಲಯದ ಸಹಾಯಕ ಸಚಿವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ . ಆದರೆ ಅಂತಾರಾಷ್ಟ್ರೀಯ ಕಾನೂನಿಗೆ ಭಾರತ ಕೂಡಾ ಬಾಧ್ಯವಾಗಿರುವ ಕಾರಣ ಭಾರತವು ರೋಹಿಂಗ್ಯ ನಿರಾಶ್ರಿತರ ಸಾಮೂಹಿಕ ಗಡೀಪಾರು ಅಥವಾ ಅವರ ಜೀವಕ್ಕೆ ಅಪಾಯ ಇರುವ, ಹಿಂಸೆಗೆ ಒಳಗಾಗುವ ಸಾಧ್ಯತೆ ಇರುವ ಯಾವುದೇ ಪ್ರದೇಶಕ್ಕೆ ಅವರನ್ನು ಮರಳಿಸುವಂತಿಲ್ಲ ಎಂದು ಹುಸೈನ್ ಹೇಳಿದರು.

 ಬೌದ್ಧ ಧರ್ಮೀಯರೇ ಅಧಿಕಸಂಖ್ಯೆಯಲ್ಲಿರುವ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯ ಮುಸ್ಲಿಮ್ ಸಮುದಾಯಕ್ಕೆ ಪೌರತ್ವ ನಿರಾಕರಿಸಲಾಗಿದ್ದು ಅವರ ವಿರುದ್ಧ ತಾರತಮ್ಯದ ಧೋರಣೆ ತೋರಲಾಗುತ್ತಿದೆ. ಆಗಸ್ಟ್ 25ರಂದು ಸೇನಾಪಡೆಗಳು ನಡೆಸಿದ ಪ್ರತೀಕಾರ ಕ್ರಮದಿಂದ ಕಂಗೆಟ್ಟಿರುವ ರೋಹಿಂಗ್ಯ ಮುಸ್ಲಿಮರು ಸಾಮೂಹಿಕವಾಗಿ ನೆರೆಯ ದೇಶಗಳಾದ ಬಾಂಗ್ಲಾ, ಭಾರತ ಇತ್ಯಾದಿ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಈ ದೇಶಗಳೂ ರೋಹಿಂಗ್ಯರಿಗೆ ಆಶ್ರಯ ನೀಡಲು ನಿರಾಕರಿಸುತ್ತಿರುವ ಕಾರಣ ಇವರು ಅಸಹಾಯಕರಾಗಿದ್ದು ಊಟ, ನಿದ್ದೆ, ಆಶ್ರಯವಿಲ್ಲದೆ ನಿಶ್ಯಕ್ತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News