ಪಿಎಫ್ ಐ ಕಾರ್ಯಚಟುವಟಿಕೆಗಳನ್ನು ನಿಗ್ರಹಿಸುವ ಪ್ರಯತ್ನದ ಮಾಧ್ಯಮಗಳ ವರದಿ ಪ್ರಜಾಪ್ರಭುತ್ವ ವಿರೋಧಿ: ಇ.ಅಬೂಬಕರ್
ಕ್ಯಾಲಿಕಟ್, ಸೆ.14: "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಚಟುವಟಿಕೆಗಳನ್ನು ನಿಗ್ರಹಿಸಲು ಕೆಲವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಇತ್ತೀಚಿನ ವರದಿಗಳು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಮತ್ತು ಈ ರೀತಿಯ ಎಲ್ಲಾ ಪ್ರಯತ್ನಗಳನ್ನು ಕಾನೂನಾತ್ಮಕ ರೀತಿಯಲ್ಲಿ ಎದುರಿಸಲು ಸಂಘಟನೆಯು ಸಿದ್ಧವಾಗಿದೆ" ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಅಬೂಬಕರ್ ಹೇಳಿದ್ದಾರೆ.
ಅವರು ಕೇರಳದ ಕ್ಯಾಲಿಕಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಪಾಪ್ಯುಲರ್ ಫ್ರಂಟ್ನ ಕಾರ್ಯಚಟುವಟಿಕೆಗಳನ್ನು ನಿಗ್ರಹಿಸುವ ನಡೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅಧಿಕಾರದಲ್ಲಿ ಕುಳಿತಿರುವ ಬಲಪಂಥೀಯ ಹಿಂದುತ್ವವಾದಿ ಸರಕಾರವು, ಸಂಘಟನೆಗೆ ಕೆಟ್ಟ ಹೆಸರು ತರುವ ಮೂಲಕ ಹಾಗೂ ಅದರ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕ್ರಮಗಳ ಮೂಲಕ ಪಾಪ್ಯುಲರ್ ಫ್ರಂಟ್ನ ಕಾರ್ಯ ಚಟುವಟಿಕೆಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಈ ರೀತಿಯ ನಡೆಗಳನ್ನು ನಾವು ಖಂಡಿಸುತ್ತೇವೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಭಾವನಾತ್ಮಕ ಕಥೆಗಳನ್ನು ಹರಡುವ ಈ ಹೊಸ ಸಂಚಿಕೆಯ ಪ್ರಾರಂಭವನ್ನು ಟೈಮ್ಸ್ ಗ್ರೂಪ್ನೊಂದಿಗೆ ಸೇರಿರುವ ವಿವಿಧ ಮಾಧ್ಯಮಗಳ ಮೂಲಕ ನಡೆಸಲಾಯಿತು. ಇದು ತನಿಖಾ ದಳವು ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ ಎಂದು ಹೇಳಲಾಗಿರುವ ದಾಖಲೆಯ ಆಧಾರದಲ್ಲಾಗಿದೆ. ಈ ದಾಖಲೆಗಳನ್ನು 2008ರಲ್ಲಿ ಯುಎಪಿಎಯ ಕಾನೂನು ತಿದ್ದುಪಡಿಯ ಭಾಗದಂತೆ ಸಿದ್ಧಪಡಿಸಲಾಗಿದೆ" ಎಂದವರು ಆರೋಪಿಸಿದರು.
"ಟೈಮ್ಸ್ ನೌ ಚಾನೆಲ್ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಉಪಾಧ್ಯಕ್ಷ ಹಾಗೂ ಜಮಾಅತೇ ಇಸ್ಲಾಮೀ ಹಿಂದ್ ನಾಯಕ ಮೌಲಾನಾ ಜಲಾಲುದ್ದೀನ್ ಉಮರಿಯವರ ಮಾತನ್ನು ತಪ್ಪಾಗಿ ಬರೆದು ಪ್ರಸಾರ ಮಾಡಿದಾಗಲೇ ಮಾಧ್ಯಮಗಳ ಈ ಭಾವನಾತ್ಮಕ ಅಪಪ್ರಚಾರವು ಬಹಿರಂಗವಾಗಿತ್ತು. ಎನ್ಐಎಯ ವರದಿಯಲ್ಲಿ ಮುಖ್ಯವಾಗಿ ನಾಲ್ಕು ಆರೋಪಗಳನ್ನು ಮಾಡಲಾಗಿದೆ. ಅದರಲ್ಲಿ ಒಂದು ಆರೋಪ ಪ್ರವಾದಿ ಮುಹಮ್ಮದ್ (ಸ.ಅ.)ರವರ ಕುರಿತು ತೀರಾ ಅಸಂಬದ್ಧ ಭಾಷೆ ಬಳಸಿದ ಪ್ರೊಫೆಸರ್ ಮೇಲೆ ದಾಳಿ ನಡೆಸಿದ್ದಾಗಿತ್ತು. ಈ ಘಟನೆಯಲ್ಲಿ ಸಂಘಟನೆಯು ಭಾಗಿಯಾಗಿಲ್ಲ ಎಂಬುದನ್ನು ಸಂಘಟನೆಯು ಸ್ವತಃ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟಪಡಿಸಿತ್ತು. ನಾರಾತ್ ಘಟನೆಯನ್ನು ನೋಡುವುದಾದರೆ, ಅದೊಂದು ಸಂಘಟನೆಯ ವಾರ್ಷಿಕ ರಾಷ್ಟ್ರೀಯ ಅಭಿಯಾನವಾದ `ಜನಾರೋಗ್ಯವೇ ರಾಷ್ಟ್ರಶಕ್ತಿ'ಯ ಅಂಗವಾಗಿ ಸದಸ್ಯರಿಗೆ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮವಾಗಿತ್ತು. ಇದಕ್ಕೆ ಕಟ್ಟುಕಥೆ ಕಟ್ಟಿ ಶಸ್ತ್ರಾಸ್ತ್ರ ತರಬೇತಿ ಎಂಬಂತೆ ಬಿಂಬಿಸಲಾಗಿತ್ತು" ಎಂದವರು ಹೇಳಿದರು.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇರಲಾಗಿದ್ದ ಯುಎಪಿಎಯನ್ನು ಕೇರಳ ಹೈಕೋರ್ಟ್ ರದ್ದು ಪಡಿಸಿತ್ತು ಮತ್ತು ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಎನ್ಐಎಯ ಮನವಿಯನ್ನು ತಿರಸ್ಕರಿಸಿತ್ತು. ಮೂರನೇ ಆರೋಪವೆಂದರೆ, ಸಂಘಟನೆಯು ಸಿರಿಯಾ ಮತ್ತು ಇರಾಕ್ನಲ್ಲಿ ಸಕ್ರಿಯವಾಗಿರುವ ಐಸಿಸ್ ಗಾಗಿ ಸದಸ್ಯರ ನೇಮಕಾತಿ ಮಾಡುತ್ತಿದೆ ಎಂದಾಗಿತ್ತು. 18 ಕೋಟಿ ಭಾರತೀಯ ಮುಸ್ಲಿಮರ ಪೈಕಿ ಕೇವಲ 60 ಜನರ ಕುರಿತಾಗಿ ಮಾತ್ರವೇ ಅವರು ಸಿರಿಯಾ ಅಥವಾ ಅಫ್ಘಾನಿಸ್ತಾನದ ಪರವಾಗಿ ಇದ್ದಾರೆಂದು ನಂಬಲಾಗುತ್ತಿದೆ. ವಾಸ್ತವವೆಂದರೆ, ಪಾಪ್ಯುಲರ್ ಫ್ರಂಟ್ ತನ್ನ ಕಾರ್ಯಕರ್ತರಿಗೆ ಬಹಳ ಮೊದಲೇ ಐಸಿಸ್ ನಂತಹ ರಹಸ್ಯ ಗುಂಪುಗಳು ಯುವಜನರಿಗೆ ಆಮಿಷ ನೀಡಿ ಸೆಳೆಯುವ ಸೋಷಿಯಲ್ ಮೀಡಿಯಾದಲ್ಲಿನ ಅವರ ಜಾಲದ ಕುರಿತು ಎಚ್ಚರಿಕೆ ನೀಡಿತ್ತು. ಈ ರೀತಿಯ ಗುಂಪುಗಳತ್ತ ಸಹಾನುಭೂತಿ ತೋರುವ ಮಂದಿ ಎಂದಾದರೂ ಕಂಡು ಬಂದರೆ ಅವರನ್ನು ಕೂಡಲೇ ಸಂಘಟನೆಯಿಂದ ಹೊರಗಟ್ಟಲಾಗುತ್ತದೆ ಎನ್ನಲಾಗಿತ್ತು. ಸಂಘಟನೆಯ ಈ ನೀತಿಯನ್ನು ಎಲ್ಲಾ ಸದಸ್ಯರಿಗೆ ಸೂಕ್ತ ಸಮಯದಲ್ಲೇ ಸುತ್ತೋಲೆಯ ಮೂಲಕ ತಿಳಿಸಲಾಗಿತ್ತು".
"ಇದರ ಹೊರತಾಗಿ ಮಂಜೇರಿಯಲ್ಲಿ ಸ್ಥಾಪಿಸಲಾಗಿರುವ ಧಾರ್ಮಿಕ ಶೈಕ್ಷಣಿಕ ಸಂಸ್ಥೆ ಸತ್ಯ ಸರಣಿಯನ್ನು ಹಿಂದುತ್ವ ಶಕ್ತಿಗಳ ಜನಾಂಗೀಯ ಪ್ರಚಾರ `ಲವ್ ಜಿಹಾದ್'ನೊಂದಿಗೆ ಜೋಡಿಸುವ ಪ್ರಯತ್ನವು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಇಸ್ಲಾಮ್ ಸ್ವೀಕರಿಸಿದ ಮಹಿಳೆ ಹಾದಿಯಾಳಿಗೆ ಆಕೆಯ ಇಚ್ಛೆಯ ಅನುಸಾರವಾಗಿ ಇಸ್ಲಾಮಿನ ಅಧ್ಯಯನಕ್ಕಾಗಿ ಸತ್ಯ ಸರಣಿಯಲ್ಲಿ ದಾಖಲಿಸುವ ತೀರ್ಪನ್ನು ಕೇರಳ ಹೈಕೋರ್ಟ್ನ ವಿಭಾಗೀಯ ಪೀಠವು ನೀಡಿತ್ತು. ಇದೇ ಕೋರ್ಟ್ ಎ.ಎಸ್.ಝೈನಬ್ರನ್ನು ಹಾದಿಯಾಳ ಸ್ಥಳೀಯ ಸಂರಕ್ಷಕಿಯನ್ನಾಗಿ ನಿಯೋಜಿಸಿತ್ತು. ಸತ್ಯ ಸರಣಿಯು ಯಾವುದೇ ಧರ್ಮ ಪರಿವರ್ತನೆಗೊಳಿಸುವ ಕೇಂದ್ರವಲ್ಲ, ಇದೊಂದು ಶೈಕ್ಷಣಿಕ ಸಂಸ್ಥೆಯಾಗಿದೆ. ಇದರ ಜೊತೆಗೆ ಎಲ್ಲಾ ಭಾರತೀಯ ನಾಗರಿಕರಿಗೆ ತಮ್ಮ ಇಚ್ಛಾನುಸಾರವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಅದನ್ನು ಪ್ರಚಾರ ಮಾಡುವ ಸಂಪೂರ್ಣ ಹಕ್ಕು ಖಾತರಿಪಡಿಸಲಾಗಿದೆ ಎಂಬುದು ಕೂಡ ಗಮನಾರ್ಹವಾಗಿದೆ".
"ಪಾಪ್ಯುಲರ್ ಫ್ರಂಟ್, ಸಾವಿರಾರು ಮಂದಿ ಸದಸ್ಯರಿರುವ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಿಸುತ್ತಿರುವ ಒಂದು ಸಂಘಟನೆಯಾಗಿದೆ. ಶಿಕ್ಷಣಕ್ಕೆ ಉತ್ತೇಜಿಸುವ ಮತ್ತು ಬಡತನ ನಿರ್ಮೂಲನೆಯನ್ನು ಆಧರಿಸಿರುವ ಇದರ ವಿವಿಧ ಕಾರ್ಯಕ್ರಮಗಳು ಸರಕಾರದಿಂದಲೇ ಪ್ರಶಂಸೆಗೊಳಗಾಗಿದೆ. ಫ್ಯಾಶಿಸಂ ಎಂಬುದು ಪ್ರಸಕ್ತ ಸಮಯದಲ್ಲಿ ದೇಶಕ್ಕೆ ಬಹುದೊಡ್ಡ ಗಂಡಾಂತರವಾಗಿದೆ ಎಂಬ ಪಾಪ್ಯುಲರ್ ಫ್ರಂಟ್ ನಿಲುವು ಇದೀಗ ಎಲ್ಲರಿಗೂ ಸ್ಪಷ್ಟವಾಗಿದೆ. ಕೇವಲ ಇದೇ ಕಾರಣಕ್ಕಾಗಿ ಸಂಘಟನೆಯನ್ನು ಕೇಂದ್ರ ಸರಕಾರವು ಗುರಿಪಡಿಸುತ್ತಿದೆ. ತನ್ನ ವಿರುದ್ಧ ಮಾಡಲಾಗುತ್ತಿರುವ ಎಲ್ಲಾ ಪ್ರಯತ್ನಗಳನ್ನು ಪ್ರಜಾಪ್ರಭುತ್ವ ಮತ್ತು ಕಾನೂನಾತ್ಮಕ ರೀತಿಯಲ್ಲಿ ತಡೆಯಲು ಮತ್ತು ಅದನ್ನು ಎದುರಿಸಲು ಸಂಘಟನೆಯು ಸಂಪೂರ್ಣವಾಗಿ ಸಿದ್ಧವಿದೆ" ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇರಳ ರಾಜ್ಯಾಧ್ಯಕ್ಷ ನಸೀರುದ್ದೀನ್ ಎಲಮರಂ ಉಪಸ್ಥಿತರಿದ್ದರು.