'ಹೇಟ್ ಟ್ರ್ಯಾಕರ್'ಗೆ ಬಲಿಯಾದರೇ ಹಿಂದೂಸ್ತಾನ್ ಟೈಮ್ಸ್ ನ ಬಾಬ್ಬಿ ಘೋಷ್?
ಹೊಸದಿಲ್ಲಿ, ಸೆ.25: 'ಹಿಂದೂಸ್ತಾನ್ ಟೈಮ್ಸ್'ನ ಮಾಲಕಿ ಶೋಭನಾ ಭಾರ್ತಿಯವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಿದ ಮಾತುಕತೆಯ ಬೆನ್ನಿಗೇ ಪತ್ರಿಕೆಯ ಸಂಪಾದಕ ಬಾಬ್ಬಿ ಘೋಷ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು ಎಂದು thewire.in ಇತ್ತೀಚಿಗೆ ವರದಿ ಮಾಡಿದೆ. ಘೋಷ್ ಅವಧಿಯಲ್ಲಿನ ಹಿಂದೂಸ್ತಾನ್ ಟೈಮ್ಸ್ ನ ಸಂಪಾದಕೀಯ ಧೋರಣೆ ವಿಚಾರದಲ್ಲಿ ಕೇಂದ್ರ ಸಚಿವರುಗಳಿಗೆ ಹಾಗು ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಕೆಲವರಿಗೆ ಇದ್ದ ಅಸಮಧಾನ ಈ ನಿರ್ಧಾರದ ಹಿಂದೆ ಕೆಲಸ ಮಾಡಿದೆ ಎಂದು ಈ ವರದಿ ಹೇಳಿದೆ.
ಪತ್ರಿಕೆಯ ಮೂಲಗಳ ಪ್ರಕಾರ ಹಿಂದೂಸ್ತಾನ್ ಟೈಮ್ಸ್ ನ ಪ್ರಮುಖ ಕಾರ್ಯಕ್ರಮ ಲೀಡರ್ ಶಿಪ್ ಸಮ್ಮಿಟ್ ನಲ್ಲಿ ಪ್ರಧಾನಿ ಮೋದಿಯವರ ಭಾಗವಹಿಸುವಿಕೆ ಪತ್ರಿಕೆಯ ಮಾಲಕಿ ಶೋಭನಾ ಅವರಿಗೆ ಆದಾಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿತ್ತು. ಆದರೆ ಈ ಬಗ್ಗೆ ಅಹ್ವಾನ ನೀಡಲು ಹೋದಾಗ ಅವರನ್ನು ಕೇಂದ್ರ ಸರ್ಕಾರದ ಹಿರಿಯ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತುಕತೆಯ ಸಂದರ್ಭ ಘೋಷ್ ಬಂದ ಮೇಲೆ ಹಿಂದೂಸ್ತಾನ್ ಟೈಮ್ಸ್ ನ ಸಂಪಾದಕೀಯ ಧೋರಣೆ , ಸಾಮಾಜಿಕ ಜಾಲತಾಣದಲ್ಲಿ ಘೋಷ್ ರ ವೈಯಕ್ತಿಕ ದೃಷ್ಟಿಕೋನಗಳಿಗೆ ಸಂಬಂಧಿಸಿ ಹಾಗೂ ಘೋಷ್ ಬಳಿ ಭಾರತೀಯ ಪೌರತ್ವ ಇಲ್ಲದಿರುವ ವಿಚಾರಕ್ಕೆ ಸಂಬಂಧಿಸಿ ಶೋಭನಾ ಹಿರಿಯ ಸಚಿವರುಗಳಿಂದ ತೀವ್ರ ಆಕ್ಷೇಪವನ್ನು ಎದುರಿಸಿದರು. ಅಷ್ಟೇ ಅಲ್ಲದೆ ಈ ವಿಚಾರವನ್ನು ಪ್ರಧಾನಿಯರ ಬಳಿಯೂ ಒಯ್ಯುವುದಾಗಿ ಸಚಿವರೊಬ್ಬರು ಎಚ್ಚರಿಕೆ ನೀಡಿದರು ಎಂದು thewire.in ವರದಿ ಮಾಡಿದೆ.
ಆದರೆ ಆ ಭೇಟಿ ಪತ್ರಿಕೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸುವಿಕೆ ಖಚಿತಪಡಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಅಲ್ಲಿ ಬೇರೆ ಯಾವುದೇ ವಿಷಯಗಳು ಚರ್ಚೆಯಾಗಿಲ್ಲ ಎಂದು ಕೇಂದ್ರ ಸರಕಾರ ಪ್ರತಿಪಾದಿಸಿದೆ. ಬಾಬ್ಬಿ ಘೋಷ್ ವೈಯಕ್ತಿಕ ಕಾರಣಗಳಿಂದ ಹುದ್ದೆ ತೊರೆದಿದ್ದಾರೆ. ಅದಕ್ಕೆ ಪ್ರಧಾನಿ ಸಹಿತ ಬೇರೆ ಯಾರೂ ಕಾರಣರಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ಹೇಳಿಕೆ ನೀಡಿದೆ. ಬಾಬ್ಬಿ ಘೋಷ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಅನುಭವಿ ಪತ್ರಕರ್ತ ಬಾಬ್ಬಿ ಘೋಷ್ 2016ರ ಮೇ ತಿಂಗಳಲ್ಲಿ ಹಿಂದೂಸ್ತಾನ್ ಟೈಮ್ಸ್ ಅನ್ನು ಸೇರಿದ್ದರು. ಇದಕ್ಕೂ ಮೊದಲು ಅವರು ಕ್ವಾರ್ಟ್ಜ್ ಹಾಗು ಟೈಮ್ ಮ್ಯಾಗಝಿನ್ ನ ಅಂತಾರಾಷ್ಟ್ರೀಯ ಆವೃತ್ತಿಯಲ್ಲಿ ಸಂಪಾದಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
16 ತಿಂಗಳ ಕಾಲ ಹಿಂದೂಸ್ತಾನ್ ಟೈಮ್ಸ್ ನ ಸಂಪಾದಕರಾಗಿದ್ದ ಅವರು ಈ ಅವಧಿಯಲ್ಲಿ ಬಿಜೆಪಿಗೆ ಬಿಸಿ ಮುಟ್ಟಿಸಿದ್ದರು. ಸೆಪ್ಟಂಬರ್ 11ರಂದು ಘೋಷ್ ಹಿಂದೂಸ್ತಾನ್ ಟೈಮ್ಸ್ ತೊರೆದಿರುವುದಾಗಿ ಭಾರ್ತಿಯಾ ಘೋಷಿಸಿದ್ದರು, ಘೋಷ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿರಲಿಲ್ಲ. “ವೈಯಕ್ತಿಕ ಕಾರಣಗಳಿಂದಾಗಿ ಅವರು ನ್ಯೂಯಾರ್ಕ್ ಗೆ ಮರಳುತ್ತಿದ್ದಾರೆ” ಎಂದು ಹೇಳಿದ್ದರು. ತಾನು ಸಂಸ್ಥೆಯಿಂದ ಹೊರನಡೆಯುತ್ತಿರುವ ಬಗ್ಗೆ ಘೋಷ್ ಯಾವುದೇ ಹೇಳಿಕೆ ನೀಡದೇ ಇರುವುದೇ ಅವರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಲಾಗಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು thewire.in ವರದಿ ಮಾಡಿದೆ.
ಘೋಷ್ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಾರಂಭಿಸಿದ ಗುಂಪು ಹಿಂಸಾಚಾರದ ದಾಖಲೆ ಸಂಗ್ರಹಿಸುವ ರಾಷ್ಟ್ರ ಮಟ್ಟದ ' ಹೇಟ್ ಟ್ರ್ಯಾಕರ್ ' ವೆಬ್ ಸೈಟ್ ಬಿಜೆಪಿ ಹಾಗು ಕೇಂದ್ರದ ಕಣ್ಣು ಕೆಂಪಾಗಿಸಿತ್ತು ಎಂದು ಹೇಳಲಾಗಿದೆ. ಈ ವೆಬ್ ಸೈಟ್ ನ ದಾಖಲೆಗಳ ಮೂಲಕ ಅಸಹಿಷ್ಣುತೆ, ಕೋಮು ಹಿಂಸೆಯ ಚರ್ಚೆ ಕಾವು ಪಡೆಯುವುದು ಕೇಂದ್ರದ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗಿದೆ. 'ಹೇಟ್ ಟ್ರ್ಯಾಕರ್' ಘೋಷ್ ನಿರ್ಗಮನಕ್ಕೆ ಪ್ರಮುಖ ಕಾರಣ ಎಂದು ಪತ್ರಿಕೆಯ ಒಳಗಿನ ಮೂಲಗಳನ್ನು ಉಲ್ಲೇಖಿಸಿ thewire.in ಹೇಳಿದೆ. ಘೋಷ್ ನಿರ್ಗಮನದ ಬಳಿಕ ' ಹೇಟ್ ಟ್ರ್ಯಾಕರ್ ' ಕುರಿತು ಹಿಂದೂಸ್ತಾನ್ ಟೈಮ್ಸ್ ತಂಡದಿಂದ ಕಾಣುತ್ತಿರುವ ಅನಾದರ ಹಾಗು ಅದನ್ನು ಹೆಚ್ಚು ಪ್ರಚಾರ ಮಾಡಬೇಡಿ ಎಂದು ಅಧಿಕೃತ ಸೂಚನೆ ನೀಡಿರುವ ಇಮೇಲ್ ಈ ವಾದಕ್ಕೆ ಪುಷ್ಟಿ ಒದಗಿಸುತ್ತವೆ.
ಜುಲೈ ಯಲ್ಲಿ ಹಿಂದೂಸ್ತಾನ್ ಟೈಮ್ಸ್ ನ ವೆಬ್ ಸೈಟ್ ನಲ್ಲಿ ಕೇಂದ್ರ ಸರ್ಕಾರದ ಚೀನಾ ನೀತಿಯನ್ನು ಟೀಕಿಸಿ ಬರೆದಿದ್ದ ಲೇಖನವೊಂದು ಪ್ರಕಟವಾದ ಕೆಲವೇ ಹೊತ್ತಿನಲ್ಲಿ ಮಾಯವಾಗಿತ್ತು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ, ಅಸಮಾಧಾನ ವ್ಯಕ್ತವಾದಾಗ ಲೇಖನ ಮತ್ತೆ ಪ್ರತ್ಯಕ್ಷವಾಯಿತು.
ಕೇಂದ್ರ ಹಾಗು ಆಮ್ ಆದ್ಮಿ ಪಕ್ಷದ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿದ್ದಾಗ ಹಿಂದೂಸ್ತಾನ್ ಟೈಮ್ಸ್ ನ ಹಿರಿಯ ಸಂಪಾದಕ ಶಿಶಿರ್ ಗುಪ್ತ ಪತ್ರಿಕೆಯಲ್ಲಿದ್ದು ಬಿಜೆಪಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು ಎಂದು ಆರೋಪ ಎದುರಿಸಿದ್ದರು. ಆದರೆ ಆ ಆರೋಪವನ್ನು ಪತ್ರಿಕೆ ಸಾರಾಸಗಟಾಗಿ ತಿರಸ್ಕರಿಸಿತ್ತು.
ಯುಪಿಎ ಅವಧಿಯಲ್ಲೂ ಆಗಿತ್ತು
2008ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಇರುವಾಗಲೂ ಇಂತಹದ್ದೇ ಪ್ರಕರಣ ನಡೆದಿತ್ತು. ಆಗ ಪ್ರಧಾನಿ ತಮ್ಮ ಸಂಪುಟದೊಳಗೆ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಂದ ಲೇಖನವೊಂದಕ್ಕೆ ಸಂಬಂಧಿಸಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಜೊತೆ ಸಾರ್ವಜನಿಕವಾಗಿ ಜಗಳಕ್ಕಿಳಿದ ಹಿಂದೂಸ್ತಾನ್ ಟೈಮ್ಸ್ ಬಳಗದ ವಾಣಿಜ್ಯ ವಿಷಯಗಳ ಪತ್ರಿಕೆ 'ಮಿಂಟ್' ಸಂಪಾದಕ ರಾಜು ನರಿಸೆಟ್ಟಿ ಹಠಾತ್ತನೆ ಹುದ್ದೆ ಕಳೆದುಕೊಂಡಿದ್ದರು.