ಕೊಂಬಾರು: ಕೆರೆಗೆ ಬಿದ್ದು ಶಾಲಾ ಬಾಲಕ ಮೃತ್ಯು
Update: 2017-10-03 10:31 GMT
ಕಡಬ, ಅ.3: ಕೆರೆಗೆ ಬಿದ್ದು ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ಕೊಂಬಾರು ಎಂಬಲ್ಲಿ ಸೋಮವಾರ ರಾತ್ರಿ ಬೆಳಕಿಗೆ ಬಂದಿದೆ.
ಇಲ್ಲಿನ ಕೊಂಬಾರು ಗ್ರಾಮದ ಕೊಡೆಂಕೀರಿ ನಿವಾಸಿ ನಾಗೇಶ್ ಎಂಬವರ ಪುತ್ರ ರಕ್ಷಿತ್(8) ಮೃತಪಟ್ಟ ಬಾಲಕ. ರಕ್ಷಿತ್ ನನ್ನು ಮನೆಯಲ್ಲಿ ಬಿಟ್ಟು ನಾಗೇಶ್ ದಂಪತಿ ಪೇಟೆಗೆ ಹೋಗಿದ್ದರು. ಮನೆಗೆ ಹಿಂದಿರುಗಿದಾಗ ರಕ್ಷಿತ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಕದಲ್ಲೆಲ್ಲಾ ಹುಡುಕಾಡಿದಾಗ ರಕ್ಷಿತ್ ನ ಮೃತದೇಹ ಕೆರೆಯಲ್ಲಿ ಕಂಡುಬಂದಿದೆ.
ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ನಾಗೇಶ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಗೇರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದ ರಕ್ಷಿತ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತೋಟಕ್ಕೆ ಆಡಲೆಂದು ತೆರಳಿ ಕಾಲು ಜಾರಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.