ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಉಳ್ಳಾಲ ಠಾಣೆಗೆ ಮುತ್ತಿಗೆ

Update: 2017-10-05 12:50 GMT

ಉಳ್ಳಾಲ, ಅ. 5:  ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಬುಧವಾರ ಅಮಾಯಕ ಝುಬೈರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿ ಸುವಂತೆ ಬಿಜೆಪಿ ಮುಖಂಡರು ಹಾಗೂ ಉಳ್ಳಾಲದ ನಾಗರಿಕರು ಜತೆಯಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಗುರುವಾರ ಸಂಜೆ ಮುತ್ತಿಗೆ ಹಾಕಿ ಆಗ್ರಹಿಸಿದರು.

ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಈ ಸಂದರ್ಭದಲ್ಲಿ ಮಾತನಾಡಿ, ಬಿಜೆಪಿ ಕಾರ್ಯಕರ್ತ ಝುಬೈರ್ ಅಮಾಯಕನಾಗಿದ್ದು, ಯಾವುದೇ ಕೃತ್ಯಗಳಲ್ಲಿ ಭಾಗಿಯಾದವನಲ್ಲ. ಇಂತಹ ವ್ಯಕ್ತಿಯನ್ನು ಹತ್ಯೆಗೈದ ಗೂಂಡಾ ಪಡೆಯನ್ನು ಪೊಲೀಸರು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಉಳ್ಳಾಲದಲ್ಲಿ ಅನೇಕ ಘಟನೆಗಳು ನಡೆಯುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗದೆ ಅವರು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮನೆ ಧ್ವಂಸ ಮಾಡಿದರೂ, ಹಲ್ಲೆ ನಡೆಸಿದರೂ ಆರೋಪಿಗಳಿಗೆ ಶಿಕ್ಷಯಾಗುತ್ತಿಲ್ಲ. ಅದಕ್ಕಾಗಿ ಪೊಲೀಸರು ಆರೋಪಿಗಳನ್ನು ಮಾತ್ರವಲ್ಲ, ಅವರನ್ನು ಬಳಸುವ, ಸುಪಾರಿ ಕೊಡುವವರನ್ನು ಬಂಧಿಸಬೇಕಿದೆ. ಇದರ ಜತೆಗೆ ಗಾಂಜಾ ವ್ಯಸನಿಗಳು ಹಾಗೂ ಅದರ ಮೂಲವನ್ನು ಪತ್ತೆಹಚ್ಚದೇ ಇದ್ದಲ್ಲಿ ಝುಬೈರ್ ನಂತಹ ಅಮಾಯಕರ ಹತ್ಯೆಗಳು ನಡೆಯುತ್ತಲೇ ಇರುತ್ತೆ ಎಂದು ಪೊಲೀಸರಿಗೆ ಎಚ್ಚರಿಸಿದರು.

ಓಮ್ನಿ ಕಾರನ್ನು ಪತ್ತೆಹಚ್ಚಿ : ಹತ್ಯೆಗೀಡಾದ ಝುಬೈರ್ ಸಹೋದರ ಆಸೀಫ್ ಮಾತನಾಡಿ ‘ಹತ್ಯೆ ನಡೆಯುವ ಸಂದರ್ಭ ಸ್ಥಳದಲ್ಲಿ ಓಮ್ನಿ ಕಾರು ಇತ್ತು. ಅದನ್ನು ಪೊಲೀಸರು ಪರಿಶೀಲಿಸುವ ಗೋಜಿಗೆ ಮುಂದಾಗಿಲ್ಲ. ಅದನ್ನು ಪತ್ತೆಹಚ್ಚಿದಲ್ಲಿ ಆರೋಪಿಗಳು ಮಾತ್ರವಲ್ಲ ಹತ್ಯೆ ನಡೆಸಲು ಪ್ರಚೋದಿಸಿದವರನ್ನು ಬಂಧಿಸಲು ಸಾಧ್ಯ ಎಂದು ಪೊಲೀಸರಿಗೆ ತಿಳಿಸಿದರು.

ಮುತ್ತಿಗೆ ವೇಳೆ 500ಕ್ಕೂ ಅಧಿಕ ಮಂದಿ ಠಾಣೆ ಮುಂದೆ ಜಮಾಯಿಸಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಅವರು ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಗುಂಪು ವಾಪಸ್ಸಾಯಿತು.

ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮುನೀರ್ ಬಾವಾ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಫಝಲ್ ಅಸೈಗೋಳಿ, ಜಯರಾಮ ಶೆಟ್ಟಿ ಕಂಬ್ಳಪದವು, ಅಶ್ರಫ್ ಹರೇಕಳ, ಸಿರಾಜ್ ಮುಡಿಪು, ಅಸ್ಗರ್ ಸಾಂಬಾರ್‌ತೋಟ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News