ದೀಪಾವಳಿ: ಮುಂಜಾಗ್ರತಾ ಕ್ರಮಗಳಿಗೆ ಸಲಹೆ

Update: 2017-10-10 17:20 GMT

ಉಡುಪಿ, ಅ.10:ದೀಪಾವಳಿ ಹಬ್ಬಗಳ ಸಂದರ್ದಲ್ಲಿ ತಾತ್ಕಾಲಿಕ ಸುಡುಮದ್ದು (ಪಟಾಕಿ) ಮಾರಾಟ ಮತ್ತು ಸುಡುವ ಬಗ್ಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯೊಂದರ ಮೂಲಕ ಸೂಚನೆಗಳನ್ನು ನೀಡಿದ್ದಾರೆ.

 ಸುಡುಮದ್ದುಗಳನ್ನು ಅಧಿಕೃತ ಪರವಾನಿಗೆ ಹೊಂದಿದ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಸುಡುಮದ್ದುಗಳ ಮೇಲೆ ಗುರುತಿಸಿದ ಸುರಕ್ಷತಾ ಮುಂಜಾಗ್ರತೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸುಡುಮದ್ದುಗಳನ್ನು ಉರಿಸಲು ಒಂದು ಕ್ಯಾಂಡಲ್ ಅಥವಾ ಅಗರಬತ್ತಿಯನ್ನು ಬಳಸಬಹುದು. ಸುಡುಮದ್ದು ಹಚ್ಚುವ ಸ್ಥಳದಲ್ಲಿ ಕೈಗೆ ಎಟಕುವಂತೆ, ಹತ್ತಿರದಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಳ್ಳಬೇಕು. ಅಪಾಯಕಾರಿ ಸುಡುಮದ್ದುಗಳನ್ನು ಸುರಕ್ಷಿತವಾಗಿ, ಕೆಳಗೆ ಬೀಳಬಹುದಾದ ಬಯಲಿನಲ್ಲಿ ಉಪಯೋಗಿಸಬೇಕು.

ಸುಡುಮದ್ದುಗಳನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚಬಾರದು, ಅವುಗಳನ್ನು ಕೆಳಗೆ ಇಟ್ಟು ಹೊತ್ತಿಸಿ ಬಹುದೂರ ಹೋಗಬೇಕು. ಸುಡುಮದ್ದುಗಳನ್ನು ಹೊತ್ತಿಸಲು ಯಾವುದೇ ಡಬ್ಬಾ ಪಾತ್ರೆಗಳನ್ನು ಉಪಯೋಗಿಸಬಾರದು. ಸುಡುಮದ್ದುಗಳನ್ನು ಹಚ್ಚುವಾಗ ಎತ್ತರದ ತಡೆಗೋಡೆ, ಮರಗಳು, ವಿದ್ಯುತ್ ತಂತಿ ಇರುವಲ್ಲಿ ಅವುಗಳ ಕೆಳಗೆ ಬಳಸಕೂಡದು. ಸುಡುಮದ್ದುಗಳನ್ನು ಮನೆಯ ಒಳಗೆ ಹಚ್ಚಲೇಬಾರದು, ಮನೆಯಿಂದ ಆದಷ್ಟು ದೂರ ಬಳಸಬಹುದು.

ಸುಡುಮದ್ದುಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಸಿಡಿಸಬಾರದು. ಖೋಟಾ ಅಕ್ರಮ ಸುಡುಮದ್ದುಗಳನ್ನು ಉಪಯೋಗಿಸಬಾರದು. ಕಣ್ಣು ಮತ್ತು ಕಿವಿಗಳ ಸುರಕ್ಷೆ ದೃಷ್ಟಿಯಿಂದ ಯಾವುದೇ ಸುಡುಮದ್ದುಗಳನ್ನು ಹಚ್ಚುವಾಗ ವಿಫಲ ವಾದಲ್ಲಿ ಪುನ: ಹತ್ತಿಸಲು ಹೋಗದೆ ಸುಮಾರು 15-20 ನಿಮಿಷ ನಿರೀಕ್ಷಿಸಿ ಅನಂತರ ಅದನ್ನು ಒಂದು ಬಕೆಟ್ ನೀರಿನಲ್ಲಿ ಹಾಕಬೇಕು. ಅಧಿಕ ಶಬ್ದ ಬರುವ ಯಾವುದೇ ಸುಡುಮದ್ದುಗಳನ್ನು ಬಳಸಬಾರದು. ಮಕ್ಕಳು ಸುಡುಮದ್ದುಗಳನ್ನು ಬಳಸುವಾಗ ಅವರ ಹತ್ತಿರ ಪೋಷಕರಿರಬೇಕು.ಸುಡುಮದ್ದುಗಳನ್ನು ರಾತ್ರಿ 10 ಗಂಟೆಯ ನಂತರ ಬಳಸಬಾರದು. ಸುಡುಮದ್ದುಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News