ಜಗತ್ಪ್ರಸಿದ್ಧವಾಗದೆ ಇರುತ್ತಿದ್ದರೆ ತಾಜ್ ಮಹಲ್ ಕೂಡ ಬಾಬರಿ ಮಸೀದಿಯಂತೆ ಧ್ವಂಸಗೊಳ್ಳುತ್ತಿತ್ತು
Update: 2017-10-18 12:44 GMT
ಹೊಸದಿಲ್ಲಿ, ಅ.18: ತಾಜ್ ಮಹಲ್ ಬಗ್ಗೆ ಬಿಜೆಪಿಯ ಕೆಲ ನಾಯಕರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್, ಬಾಬರಿ ಮಸೀದಿಯಂತೆ ಈ ಹಿಂದೆಯೇ ತಾಜ್ ಮಹಲ್ ಧ್ವಂಸಗೊಳ್ಳುತ್ತಿತ್ತು. ಆದರೆ ಜಗತ್ಪ್ರಸಿದ್ಧವಾದ ಕಾರಣ ಮಾತ್ರ ಅದು ಇನ್ನೂ ಉಳಿದಿದೆ” ಎಂದು ಹೇಳಿದ್ದಾರೆ.
ತಾಜ್ ಮಹಲ್ ಶಿವ ದೇವಾಲಯವಾಗಿತ್ತು. ಮೊಗಲರು ಶಿವ ದೇವಾಲಯವನ್ನು ಧ್ವಂಸಗೈದು ತಾಜ್ ಮಹಲನ್ನು ನಿರ್ಮಿಸಿದ್ದಾರೆ ಎನ್ನುವ ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿಕೆಗೆ ಅಝಂ ಖಾನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
“ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಪ್ರಕರಣವಿದ್ದಾಗಲೇ ಬಾಬರಿ ಮಸೀದಿಯನ್ನು ಧ್ವಂಸಗೈಯಲಾಗಿತ್ತು. ತಾಜ್ ಮಹಲ್ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ನಾನು ನಂಬುತ್ತೇನೆ…. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಪ್ರಸಿದ್ಧವಾಗಿರುವುದರಿಂದ ಅದು ಇನ್ನೂ ತಲೆಯೆತ್ತಿ ನಿಂತಿದೆ” ಎಂದವರು ಹೇಳಿದ್ದಾರೆ.