ನೋಟುರದ್ಧತಿ, ಜಿಎಸ್ಟಿಯಿಂದ ಆರ್ಥಿಕತೆ ಕುಸಿತ: ಕೆ.ಶಂಕರ್
ಕುಂದಾಪುರ, ಅ.20: ಕೇಂದ್ರದ ಎನ್ಡಿಎ ನೇತೃತ್ವದ ಮೋದಿ ಸರಕಾರದ ಜನಪ್ರಿಯತೆ ಪಾತಾಳಕ್ಕಿಳಿಯುತ್ತಿದ್ದು, ಈ ಹತಾಶೆಯಿಂದ ಅದು ಎಡಪಕ್ಷಗಳ ಮೇಲೆ ದಾಳಿ ನಡೆಸುತ್ತಿದೆ. ನೋಟು ರದ್ದತಿ, ಜಿಎಸ್ಟಿ ವೈಪಲ್ಯಗಳಿಂದಾಗಿ ದೇಶದ ಆರ್ಥಿಕತೆ ಹದಗೆಡುತ್ತಿದೆ. ಮಧ್ಯಮ, ಸಣ್ಣ ಮತ್ತು ಕಿರುಗಾತ್ರದ ಕೈಗಾರಿಕೆ ಗಳು ನಾಶವಾಗುತ್ತಿವೆ ಎಂದು ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಟೀಕಿಸಿದ್ದಾರೆ.
ಗುಲ್ವಾಡಿ ಸಿಪಿಎಂ ಪ್ರಭಾಕಿರಣ ಕಾರ್ಖಾನೆ ಶಾಖೆ ಸಮ್ಮೇಳನವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು. ದೊಡ್ಡ ಕಾರ್ಪೋರೆಟ್ಗಳು ಮರು ಪಾವತಿ ಮಾಡದ 2 ಲಕ್ಷ ಕೋಟಿ ರೂ ಸಾಲ ಸರಕಾರ ಮನ್ನಾ ಮಾಡಿದೆ. ಮೋದಿ ಸರಕಾರವು ಕಾರ್ಪೋರೇಟ್ ಹಿತ ಕಾಯುವ ನಿಷ್ಟಾವಂತ ಸರಕಾರ ವಾಗಿದೆ ಎಂದು ಅವರು ಆರೋಪಿಸಿದರು.
ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ವಲಯ ಮುಖಂಡ ಜಿ.ಡಿ.ಪಂಜು ಮಾತನಾಡಿದರು. ಸಂಜೀವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಘವೇಂದ್ರ ಮೊಗವೀರ ವರದಿ ಮಂಡಿಸಿದರು. ಜೋಗ ವಂದಿಸಿದರು.