ಬೇರೆ ರಾಷ್ಟ್ರದ ಪರ ಆಡುವ ಸುಳಿವು ನೀಡಿದ ಶ್ರೀಶಾಂತ್
ಹೊಸದಿಲ್ಲಿ, ಅ.20: ತನ್ನ ಮೇಲೆ ಬಿಸಿಸಿಐ ವಿಧಿಸಿದ್ದ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದ ಮೇಲೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಬೇರೆ ರಾಷ್ಟ್ರದ ಪರವಾಗಿ ಆಡುವ ಸುಳಿವು ನೀಡಿದ್ದಾರೆ.
2013ರಲ್ಲಿ ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಶ್ರೀಶಾಂತ್ ಅವರಿಗೆ ನಿಷೇಧ ಹೇರಲಾಗಿತ್ತು. ಬಿಸಿಸಿಐ ಹೇರಿದ್ದ ನಿಷೇಧವನ್ನು ತೆಗೆದುಹಾಕುವಂತೆ ಸೆಪ್ಟಂಬರ್ 18ರಂದು ನ್ಯಾಯಾಲಯದ ಏಕಸದಸ್ಯ ಪೀಠ ಆದೇಶಿಸಿತ್ತು.
ನಂತರ ಬಿಸಿಸಿಐ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ತೀರ್ಪು ನೀಡಿದ ಹೈಕೋರ್ಟ್ ಶ್ರೀಶಾಂತ್ ಗೆ ವಿಧಿಸಿದ್ದ ನಿಷೇಧವನ್ನು ಎತ್ತಿಹಿಡಿದಿತ್ತು.
ಏಶಿಯಾನೆಟ್ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಬೇರೆ ರಾಷ್ಟ್ರದ ಪರ ಆಟವಾಡಲು ತಾನು ಸ್ವತಂತ್ರನಾಗಿದ್ದೇನೆ ಎಂದಿದ್ದಾರೆ.
“ಬಿಸಿಸಿಐ ನಿಷೇಧವನ್ನು ಹೇರಿದೆಯೇ ಹೊರತು ಐಸಿಸಿಯಲ್ಲ. ಭಾರತದಲ್ಲಿ ಅಲ್ಲದಿದ್ದರೆ ಬೇರೆ ಯಾವುದೇ ರಾಷ್ಟ್ರದ ಪರವಾಗಿ ನಾನು ಆಡಬಲ್ಲೆ” ಎಂದವರು ಹೇಳಿದ್ದಾರೆ.