ಶಿಕ್ಷಕರಿಗೆ ಬೆದರಿಕೆ ಯೋಚಿಸಲೂ ಸಾಧ್ಯವಿಲ್ಲ: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ,ಅ.22: ಶಿಕ್ಷಕರಿಗೆ ಬೆದರಿಕೆಯನ್ನೊಡ್ಡುವುದು ಯೋಚಿಸಲೂ ಸಾಧ್ಯವಿಲ್ಲದ ಆಘಾತಕಾರಿ ಕೃತ್ಯವಾಗಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ತನ್ನನ್ನು ಹಿಡಿದಿದ್ದಕ್ಕಾಗಿ ದಿಲ್ಲಿ ವಿವಿಯ ಕಾನೂನು ವಿದ್ಯಾರ್ಥಿಯೋರ್ವ ಮಹಿಳಾ ಪ್ರೊಫೆಸರ್ಗೆ ಬೆದರಿಕೆಯೊಡ್ಡಿದ್ದಾನೆ ಎನ್ನುವುದನ್ನು ನ್ಯಾಯಾಲಯದ ಅವಗಾಹನೆಗೆ ತರಲಾಗಿತ್ತು.
ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ ಮತ್ತು ನಾಜ್ಮಿ ವಝೀರಿ ಅವರ ಪೀಠವು, ಇಂತಹ ಸಂಸ್ಥೆಗಳನ್ನು ಶಿಕ್ಷಣಸಂಸ್ಥೆಗಳು ಮತ್ತು ಇಂತಹ ವ್ಯಕ್ತಿಗಳನ್ನು ವಿದ್ಯಾರ್ಥಿಗಳೆಂದು ಕರೆಯಲು ಹೇಸಿಗೆಯಾಗುತ್ತದೆ ಎಂದು ಹೇಳಿತು.
ದಿಲ್ಲಿ ವಿವಿಯ ಕಾನೂನು ವಿದ್ಯಾರ್ಥಿಯಾಗಿರುವ ದಿಲ್ಲಿ ವಿವಿ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಎಬಿವಿಪಿ ನಾಯಕ ಸತೇಂದರ್ ಅವಾನಾ ಈ ವರ್ಷದ ಮೇ-ಜೂನ್ನಲ್ಲಿ ಸೆಮೆಸ್ಟರ್ ಪರೀಕ್ಷೆಯ ಸಂದರ್ಭ ನಕಲು ಮಾಡುತ್ತಿದ್ದಾಗ ಮಹಿಳಾ ಪ್ರೊಫೆಸರ್ ಕೈಗೆ ಸಿಕ್ಕಿಬಿದ್ದ ಬಳಿಕ ಅವರಿಗೆ ಬೆದರಿಕೆಯನ್ನೊಡ್ಡಿದ್ದ.
ಈ ಘಟನೆಯ ಕುರಿತು ವಿಚಾರಣೆ ನಡೆಸುತ್ತಿರುವ ವಿವಿ ಸಮಿತಿಯ ಸದಸ್ಯರಿಗೂ ಬೆದರಿಕೆಯೊಡ್ಡಲು ಆತ ಯತ್ನಿಸಿದ್ದ ಎನ್ನಲಾಗಿದೆ.