ಬಿಐಟಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಮಂಗಳೂರು, ನ.4: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಇಲಾಖೆಯ ಪ್ರೊಫೆಸರ್ ಡಾ.ನಾಗಪ್ಪ ಗೌಡ ಆರ್. ಮತ್ತು ಬಿಐಟಿ ಪ್ರಾಂಶುಪಾಲ ಡಾ.ಆ್ಯಂಟನಿ ಎ.ಜೆ. ಕಾರ್ಯಕ್ರಮ ಉದ್ಘಾಟಿಸಿದರು.
ಪ್ರೊಫೆಸರ್ ಡಾ.ನಾಗಪ್ಪ ಗೌಡ ಆರ್. ಧ್ವಜಾರೋಹಣ ನೆರವೇರಿಸಿದರು. ಬಳಿಕ ಕನ್ನಡ ಭಾಷೆಯ ಸೌಂದರ್ಯ ಮತ್ತು ಸರಳತೆ ಬಗ್ಗೆ ಹಾಗೂ ಮಾತೃಭಾಷೆಯ ಮಹತ್ವವನ್ನು ಕುರಿತು ಮಾತನಾಡಿದರು.
ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಪುರುಷೋತ್ತಮ ಸಿ.ಟಿ. ಮಾತನಾಡಿ, ಮಾತೃಭಾಷೆಯನ್ನು ಬಳಸಲು ಮತ್ತು ಇತರ ಭಾಷೆಗಳಿಗೂ ಗೌರವವನ್ನು ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಳಿಕ ನೃತ್ಯ ಮತ್ತು ಹಾಡುಗಳನ್ನು ಒಳಗೊಂಡ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ವಿವಿಧ ಇಲಾಖೆಯ ಮುಖ್ಯಸ್ಥರು ಮತ್ತು ಬಿಐಟಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.