ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು ಎಂದ ಕೇಂದ್ರ ಸಚಿವ ಡಿವಿ!

Update: 2017-11-11 12:51 GMT

ಬಂಟ್ವಾಳ, ನ.11: ಬಿ.ಸಿ.ರೋಡ್‍ನ ಸರ್ಕಸ್ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡುತ್ತಿದ್ದ ವೇಳೆ "ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು" ಎಂಬ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಎಡವಟ್ಟು ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸಮಾವೇಶದಲ್ಲಿ ಸೇರಿದ ಜನರನ್ನು ಕಂಡು ರಮಾನಾಥ ರೈಯವರಿಗೆ ನಡುಕ ಉಂಟಾಗಿದೆ. ಕಾರ್ಯಕರ್ತರ ಘೋಷಣೆಗೆ ರೈಯವರು ಕುರ್ಚಿಯಿಂದ ಕೆಳಗೆ ಬಿದ್ದಿದ್ದಾರೆಂಬ ಸಂದೇಶ ನನ್ನ ಮೊಬೈಲ್‍ಗೆ ಬಂದಿದೆ. ಅಭಿವೃದ್ಧಿ ಬಗ್ಗೆ ಮಾತನಾಡುವ ರಮಾನಾಥ ರೈಯವರಿಗೆ ಲೆಕ್ಕ ಗೊತ್ತಿಲ್ಲ. 8x8 ಎಷ್ಟು ಎಂದು ಕೇಳಿದರೆ 'ಪದಿನೆಟ್' ಎಂದು ಹೇಳುತ್ತಾರೆ. ನಾಚಿಕೆಯಾಗೇಕು ನರೇಂದ್ರ ಮೋದಿಯವರಿಗೆ" ಎಂದವರು ಹೇಳಿದರು.

ಈ ಸಂದರ್ಭ ತಾನು ತಪ್ಪು ಹೇಳಿಕೆ ನೀಡಿದ್ದನ್ನು ಮನಗಂಡ ಸದಾನಂದ ಗೌಡ ಮುಜುಗರಕ್ಕೆ ಒಳಗಾದರು. ಇದನ್ನು ಕೇಳಿ ಕೆಲವರು ತಮ್ಮಷ್ಟಕ್ಕೆ ನಕ್ಕರೆ ಇನ್ನೂ ಕೆಲ ಕಾರ್ಯಕರ್ತರು ಒಬ್ಬರನ್ನೊಬ್ಬರು ನೋಡಿಕೊಂಡರು. ಸಚಿವರ ಭಾಷಣದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಸುಳ್ಯದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಬಳ್ಳಾರಿಯ ಬಿಜೆಪಿ ಸಂಸದ ಶ್ರೀರಾಮುಲು ಅವರು ಭಾಷಣದ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News