ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಪ್ರದರ್ಶನ ಸಪ್ತಾಹ ಉದ್ಘಾಟನೆ

Update: 2017-11-17 15:28 GMT

ಉಡುಪಿ, ನ.17: ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಉಡುಪಿಯ ಡಯಾನ ಚಿತ್ರಮಂದಿರದಲ್ಲಿ ಹಮ್ಮಿ ಕೊಳ್ಳಲಾದ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನ ‘ಚಲನಚಿತ್ರ ಸಪ್ತಾಹ’ವನ್ನು ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಾಮಾಜಿಕ ಕಳಕಳಿ ಹೊಂದಿರುವ ಚಲನ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಸಾರ್ವಜನಿಕರು ಇಂತಹ ಚಲನಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಬೇಕು. ಚಲನಚಿತ್ರಗಳ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಅರಿವು ಮೂಡಿಸಲು ಸಾಧ್ಯವಿದ್ದು, ಸದಭಿರುಚಿಯ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗಬೇಕು. ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿನ ಸಂದೇಶಗಳನ್ನು ಜನರು ಅರಿತುಕೊಳ್ಳಬೇಕು ಎಂದು ಹೇಳಿದರು.

ಸಾಹಿತಿ ಕಾತ್ಯಾಯನಿ ಕುಂಜಿಬೆಟ್ಟು ಮಾತನಾಡಿ, ಚಲನಚಿತ್ರಗಳು ಭಾಷೆ ಮೀರಿದ ಭಾವಗಳ ಮೂಲಕ ಬದುಕಿಗೆ ಮೌಲ್ಯವನ್ನು ಕಟ್ಟಿಕೊಡುತ್ತವೆ. ಪಥೇರ್ ಪಾಂಚಾಲಿಯಂತಹ ಚಲನಚಿತ್ರಗಳನ್ನು ನೋಡಿ ಬೆಳೆದ ನನಗೆ ಜೀವನದ ಸೌಂದರ್ಯ, ನೋವು, ವಿಚಾರಗಳನ್ನು ಕಲಿಯುವುದಕ್ಕೆ ಚಲನಚಿತ್ರಗಳು ಸಹಕಾರಿಯಾದವು. ವಿಶ್ವ ಮಾನವತೆಯಿಂದ ಹಿಡಿದು ಎಲ್ಲ ರೀತಿಯ ಬದುಕು ಗಳನ್ನು ಅರಿಯಲು ಚಲನಚಿ್ರಗಳು ನೆರವಾಗುತ್ತವೆ ಎಂದರು.

ಯಾವುದೇ ಭಾಷೆಯ ಚಲನಚಿತ್ರಗಳಾದರೂ ಅಲ್ಲಿನ ಪಾತ್ರಗಳ ಭಾವನೆ ಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲು ಸಾಧ್ಯವಿದ್ದು, ಆ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತದೆ. ಸದಭಿರುಚಿಯ ಚಿತ್ರ ಗಳನ್ನು ವೀಕ್ಷಿಸಿ ಆನಂದಿಸುವ ಮನೋಭಾವವನ್ನು ಎಲ್ಲರು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ತುಳು ಚಿತ್ರ ಕಲಾವಿದ ದಿನೇಶ್ ಅತ್ತಾವರ ಮಾತನಾಡಿ, ಕಲೆಗಳನ್ನು ಕಲಾ ಭಿಮಾನಿಗಳು ಪ್ರೋತ್ಸಾಹಿಸಬೇಕು. ಉತ್ತಮ ಚಲನಚಿತ್ರಗಳನ್ನು ಚಿತ್ರಮಂದಿರ ದಲ್ಲಿ ಕುಳಿತು ವೀಕ್ಷಿಸಬೇಕು. ಹಲವು ಕಾರಣಗಳಿಂದ ಜನರು ಥಿಯೇಟರ್ ಗಳಿಂದ ದೂರ ಇರುವ ಸಂದರ್ಭದಲ್ಲಿ ಇಲಾಖೆ ಆಯೋಜಿಸಿರುವ ಚಲನಚಿತ್ರ ಸಪ್ತಾಹ ಜನರನ್ನು ಚಿತ್ರ ವೀಕ್ಷಣೆಗೆ ಸೆಳೆಯುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಡಯಾನ ಚಿತ್ರ ಮಂದಿರದ ಮಾಲಕ ಸುಲಕ್ಷಣಾ ಪೈ, ಅಲಂಕಾರ್ ಚಿತ್ರ ಮಂದಿರದ ಜಗದೀಶ್ ಕುಡ್ವ, ಕಲ್ಪನಾ ಚಿತ್ರಮಂದಿರದ ರಾಮಕೃಷ್ಣ ಆಳ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಗ್ರೇಸಿ ಗೋನ್ಸಾ ಲ್ವಿಸ್, ಡಯಾನ ಚಿತ್ರಮಂದಿರದ ವ್ಯವಸ್ಥಾಪಕ ಸುಗಂದರ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಸ್ವಾಗತಿಸಿದರು. ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಂದಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News