ಮದ್ಯ ನಿಷೇಧದ ಪ್ರಸ್ತಾಪ ಸರಕಾರದ ಮುಂದಿಲ್ಲ: ಸಿಎಂ ಸಿದ್ದರಾಮಯ್ಯ
ಉಡುಪಿ, ನ.19: ರಾಜ್ಯದಲ್ಲಿ ಮದ್ಯಪಾನ ನಿಷೇಧಿಸುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಡುಪಿಯಲ್ಲಿ ನಿರ್ಮಿಸಲಾದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮದ್ಯ ನಿಷೇಧ ಇಲ್ಲ. ಮದ್ಯ ನಿಷೇಧಿಸಲು ಸರಕಾರದ ಮುಂದೆ ಯಾವುದೇ ಪ್ರಸ್ತಾಪ ಇಲ್ಲ ಎಂದರು.
ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ನಾಳೆ ಅಧಿವೇಶನದಲ್ಲಿ ಮಂಡಿಸಲಾಗುವುದು. ವೈದ್ಯರ ಹೋರಾಟದಲ್ಲಿ ಯಾರೂ ಸೋತಿಲ್ಲ ಹಾಗು ಯಾರೂ ಗೆದ್ದಿಲ್ಲ. ಮಸೂದೆ ಜಾರಿಯಾದರೆ ಅದು ರಾಜ್ಯದ ಜನತೆಯ ಗೆಲುವಾಗಲಿದೆ ಎಂದರು.
"ಈ ಬಾರಿ ಯಾವುದೇ ಆಹ್ವಾನ ಬಂದಿಲ್ಲದ ಕಾರಣ ಕೃಷ್ಣಮಠಕ್ಕೆ ಹೋಗುವುದಿಲ್ಲ. ಕೃಷ್ಣ ಮಠದ ಬಗ್ಗೆ ಯಾವುದೇ ದ್ವೇಷ ಇಲ್ಲ. ಈ ಹಿಂದೆ ನಾನು ಮಠಕ್ಕೆ ಹೋಗಿದ್ದೆ, ಪೇಜಾವರ ಶ್ರೀಗಳ ಜೊತೆ ಯಾವುದೇ ಸಂಘರ್ಷ ಇಲ್ಲ. ನಾನು ಶಿವಭಕ್ತನೂ ಹೌದು, ಕೃಷ್ಣ ಭಕ್ತನೂ ಹೌದು. ಲಿಂಗಾಯತ ಸಮಾವೇಶಕ್ಕೂ ನನಗೂ ಸಂಬಂಧವಿಲ್ಲ. ಅವರು ಡಿ.31ರ ಗಡುವು ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ" ಎಂದು ಸಿಎಂ ಹೇಳಿದರು.