“ಲವ್ ಜಿಹಾದ್ ಬಗ್ಗೆ ತಿಳಿಯಲು ವಿದ್ಯಾರ್ಥಿಗಳು, ಶಿಕ್ಷಕರನ್ನು ಆಧ್ಯಾತ್ಮಿಕ ಮೇಳಕ್ಕೆ ಕಳುಹಿಸಿ”

Update: 2017-11-19 12:47 GMT

ಜೈಪುರ,ನ.19: ವಿದ್ಯಾರ್ಥಿಗಳು ಮತ್ತು ಶಿಕ್ಷಕರು ‘ಲವ್ ಜಿಹಾದ್’ ಬಗ್ಗೆ ತಿಳಿದುಕೊಳ್ಳಲು ಅವರನ್ನು ಇಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಮೇಳಕ್ಕೆ ಕಳುಹಿಸುವಂತೆ ರಾಜಸ್ಥಾನ ಸರಕಾರವು ಜೈಪುರದಲ್ಲಿನ ಶಾಲೆಗಳಿಗೆ ಸೂಚಿಸಿದೆ.

ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳದ ಸಂಘಟಕರು ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಸಂಪರ್ಕಿಸಿ ಮೇಳದಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಾಸುದೇವ ದೇವ್ನಾನಿ ಅವರ ನಿರ್ದೇಶದ ಮೇರೆಗೆ ಮೇಳವನ್ನು ನಡೆಸಲಾಗುತ್ತಿದ್ದು, ಮೇಳದ ಸಂಘಟಕರಿಗೆ ನೆರವಾಗುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಜೈಪುರದ ಹೆಚ್ಚುವರಿ ಜಿಲ್ಲಾ ಶಿಕ್ಷಣಾಧಿಕಾರಿ ದೀಪಕ್ ಶುಕ್ಲಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಇಲ್ಲಿ ಮೇಳ ಮುಖ್ಯವಲ್ಲ, ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ‘ಲವ್ ಜಿಹಾದ್’ ಬಗ್ಗೆ ತಿಳಿದುಕೊಳ್ಳಲು ಈ ಮೇಳವನ್ನು ಆಯೋಜಿಸಲಾಗಿದೆ. ಸಸ್ಯಾಹಾರಿಗಳಾಗುವುದಾಗಿ ಶಪಥ ತೊಡುವಂತೆ ವಿದ್ಯಾರ್ಥಿಗಳಿಗೆ ಮೇಳದಲ್ಲಿ ಸೂಚಿಸಲಾಗುತ್ತಿದ್ದು, ಆಕಳನ್ನು ‘ರಾಷ್ಟ್ರ ಮಾತೆ ಎಂದು ಘೋಷಿಸುವಂತೆ ಆಗ್ರಹವೂ ಕೇಳಿ ಬರುತ್ತಿದೆ.

ವಿದ್ಯಾರ್ಥಿಗಳು ಸಾಮಾಜಿಕ ಪರಿವರ್ತನೆಯ ಭಾಗವಾಗಲು ಅವರಿಗೆ ನೆರವಾಗುವ ಮತ್ತು ಈ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಘಟನೆಗಳಿಗೆ ವೇದಿಕೆಯನ್ನೊದಗಿಸುವ ಉದ್ದೇಶದೊಂದಿಗೆ ನಡೆಯುತ್ತಿರುವ ಐದು ದಿನಗಳ ಮೇಳ ನ.20ರಂದು ಮುಕ್ತಾಯ ಗೊಳ್ಳಲಿದೆ. ರಾಷ್ಟ್ರಪ್ರೇಮವೂ ಮೇಳದ ಆಶಯಗಳಲ್ಲೊಂದಾಗಿದೆ.

 ಮೇಳದಲ್ಲಿ ‘ಲವ್ ಜಿಹಾದ್’ ಕುರಿತು ವಿತರಿಸಲಾಗುತ್ತಿರುವ ಕರಪತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಆಮಿರ್ ಖಾನ್ ಅವರಂತಹ ನಟರು ಹಿಂದು ಮಹಿಳೆಯರನ್ನು ಹೇಗೆ ‘ಬುಟ್ಟಿಗೆ ಹಾಕಿಕೊಂಡಿದ್ದಾರೆ’ ಎನ್ನುವುದನ್ನು ಹೇಳುತ್ತಿದೆ. ಮತಾಂತರಗೊಳ್ಳುವ ಬದಲು ಹುಟ್ಟಿದ ಧರ್ಮದಲ್ಲಿಯೇ ಸಾಯುವುದು ಒಳ್ಳೆಯದು ಎಂದು ಹೇಳಿರುವ ಈ ಕರಪತ್ರದಲ್ಲಿ, ಬ್ಯೂಟಿ ಪಾರ್ಲರ್‌ಗಳು, ಮೊಬೈಲ್ ರೀಚಾರ್ಜ್ ಅಂಗಡಿಗಳು, ಮಹಿಳೆಯರ ಟೈಲರ್‌ಗಳು, ಮುಸ್ಲಿಂ ವ್ಯಾಪಾರಿಗಳ ಸ್ಥಳ ಇತ್ಯಾದಿಗಳು ಸೇರಿದಂತೆ ‘ಲವ್ ಜಿಹಾದ್’ ನಡೆಯುವ ತಾಣಗಳನ್ನು ಪಟ್ಟಿ ಮಾಡಲಾಗಿದೆ.

ಕ್ರೈಸ್ತ ಮಿಷನರಿಗಳ ಕುರಿತ ಇನ್ನೊಂದು ಕರಪತ್ರವೂ ಮೇಳದಲ್ಲಿ ವಿತರಣೆಯಾಗುತ್ತಿದ್ದು, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳು ಕ್ರಿಶ್ಚಿಯನ್ ಬಾಹುಳ್ಯದ ರಾಜ್ಯಗಳಾಗಿದ್ದು ಹೇಗೆ ಎನ್ನುವುದನ್ನು ವಿವರಿಸಲಾಗಿದೆ. ಭಯೋತ್ಪಾದಕ ತರಬೇತಿ ಕೇಂದ್ರಗಳನ್ನೂ ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮೇಳದಲ್ಲಿ ಭಾರತೀಯ ಹಿಂದು ಸೇನಾದ ಮಳಿಗೆಯೂ ಇದ್ದು, ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುವ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮೇಳಕ್ಕೆ ಬರುವವರನ್ನು ಅದು ಆಗ್ರಹಿಸುತ್ತಿದೆ. ಗೋರಕ್ಷಾ ಸೇವಾ ಸಂಸ್ಥಾನದ ಕೆಲವು ಮಳಿಗೆಗಳು ಜೆರ್ಸಿ ಹಸುಗಳ ಹಾಲಿನ ಕೆಡುಕುಗಳನ್ನು ವಿವರಿಸುವ ಕರಪತ್ರಗಳನ್ನು ಜನರಿಗೆ ಹಂಚುತ್ತಿವೆ. ಭಾರತೀಯ ಗೋ ಕ್ರಾಂತಿ ಮಂಚ್ ಹೆಸರಿನ ಇನ್ನೊಂದು ಮಳಿಗೆಯು ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸುವಂತೆ ಒತ್ತಾಯಿಸುವ ಅಭಿಯಾನವನ್ನು ನಡೆಸುತ್ತಿದೆ. ಜೊತೆಗೆ ಕೇಂದ್ರ ಗೋ ಸಚಿವಾಲಯವನ್ನು ಸ್ಥಾಪಿಸುವಂತೆ ಮತ್ತು ಗೋಹಂತಕರಿಗೆ ಮರಣ ದಂಡನೆ ವಿಧಿಸುವಂತೆಯೂ ಅದು ಬೇಡಿಕೆಯನ್ನು ಮಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News