ಕೆಮ್ಮಾರದಲ್ಲಿ ಭೀಕರ ಅಪಘಾತ : ಇಬ್ಬರು ಮೃತ್ಯು
Update: 2017-11-23 18:42 GMT
ಉಪ್ಪಿನಂಗಡಿ, ನ.23. ಜೀಪೊಂದು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಉಂಟಾದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಕಾಣಿಯೂರಿನ ಕಟ್ಟತ್ತಾರು ನಿವಾಸಿಗಳೆಂದು ತಿಳಿದುಬಂದಿದ್ದು, ಉಪ್ಪಿನಂಗಡಿಯಿಂದ ಕಾಣಿಯೂರಿಗೆ ಆಲಂಕಾರು ಶಾಂತಿಮೊಗರು ಮೂಲಕ ತೆರಳಲಿದ್ದ ಜೀಪು ಚಾಲಕನ ನಿಯಂತ್ರಣ ತಪ್ಪಿ ಕೆಮ್ಮಾರ ಸೇತುವೆಯ ತಡೆಗೋಡೆಗೆ ಗುದ್ದಿ ರಸ್ತೆಯಲ್ಲಿ ಅಡ್ಡವಾಗಿ ನಿಂತಿದೆ.
ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀಪಿನಲ್ಲಿದ್ದ ಉಳಿದವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.