ತನ್ನ ತದ್ವಿರುದ್ಧ ಹಾದಿಹಿಡಿದ ಪುತ್ರ: ಖಿನ್ನತೆಯಲ್ಲಿ ಭೂಗತ ಪಾತಕಿ ದಾವೂದ್
ಥಾಣೆ, ನ. 26: ಭೂಗತ ಪಾತಕಿ ದಾವೂದ್ ಇಬ್ರಾಹೀಂಗೆ ಹಣಬಲ, ಮಾನವ ಶಕ್ತಿ ಎಲ್ಲವೂ ಇದ್ದರೂ, ಅವನಿಗೆ ರಾತ್ರಿ ನಿದ್ದೆ ಸರಿಯಾಗಿ ಇಲ್ಲ. ಖಿನ್ನತೆಗೊಳಗಾಗಿದ್ದಾನೆ. ಕಾರಣ ಇಷ್ಟೇ. ದಾವೂದ್ ಪುತ್ರ ತಂದೆಯ ಇಚ್ಛೆಗೆ ವಿರುದ್ಧವಾಗಿ ತನ್ನ ಬದುಕಿನ ದಾರಿ ಕಂಡು ಕೊಂಡಿದ್ದಾರೆ.
ದಾವೂದ್ನ ಏಕೈಕ ಮಗ 31ರ ಹರೆಯದ ಮೊಯಿನ್ ನವಾಝ್ ಕಸ್ಕರ್ ಓರ್ವ ಶ್ರದ್ಧಾವಂತ ಮುಸ್ಲಿಂ. ತಂದೆಯ ಅಕ್ರಮ ವ್ಯವಹಾರದಿಂದ ದೂರ ಉಳಿದು ಧಾರ್ಮಿಕ ಶಿಕ್ಷಕನ ವೃತ್ತಿಯನ್ನು ಆಯ್ದುಕೊಂಡಿದ್ದಾನೆ.
ದಾವೂದ್ ಬಳಿಕ ಆತನ ಭೂಗತ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿಯಾಗಬೇಕಿದ್ದ ಮಗ ನವಾಝ್ ತಂದೆಯ ವ್ಯವಹಾರದಿಂದ ದೂರ ಉಳಿದು ಧಾರ್ಮಿಕ ಶಿಕ್ಷಣ ಪಡೆದಿದ್ದಾನೆ. ಅಷ್ಟು ಮಾತ್ರ ಮಾಡಿದ್ದರೆ ದಾವೂದ್ ಸುಮ್ಮನಿರುತ್ತಿದ್ದ . ಆದರೆ ಆತ ಧಾರ್ಮಿಕ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡದ್ದು ದಾವೂದ್ನ ನಿದ್ದೆಗೆಡಿಸಿದೆ.
ದಾವೂದ್ ಮಗ ಮೊಯಿನ್ ಓರ್ವ ಗೌರವಾನ್ವಿತ ಮತ್ತು ಮೌಲಾನಾ ಆಗಿದ್ದಾನೆ. ಪವಿತ್ರ ಕುರ್ಆನ್ ಗ್ರಂಥವನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿ ‘ಹಾಫಿಝ್’ ಬಿರುದು ಪಡೆದಿದ್ದಾನೆ. ಕರಾಚಿಯ ಸದ್ದಾರ್ ಉಪನಗರದಲ್ಲಿ ದಾವೂದ್ ಕುಟುಂಬ ವಾಸವಾಗಿರುವ ಭವ್ಯ ಬಂಗ್ಲೆಯನ್ನು ತೊರೆದು ಪಕ್ಕದ ಮಸೀದಿಯಲ್ಲಿ ಧಾರ್ಮಿಕ ಗುರುವಾಗಿ , ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಮೊಯಿನ್ಗೆ ಮಸೀದಿಯ ಆಡಳಿತ ಸಮಿತಿಯು ಸಣ್ಣ ಮನೆಯೊಂದನ್ನು ಒದಗಿಸಿದ್ದು, ಅಲ್ಲಿ ಮೊಯಿನ್ ಪತ್ನಿ ಸಾನಿಯಾ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾನೆ.