ಬಡಜನರ ದೂರಿನ ಬಗ್ಗೆ ನಿರಾಸಕ್ತಿ: ಪೊಲೀಸರನ್ನು ತರಾಟೆಗೆತ್ತಿಕೊಂಡ ಹೈಕೋರ್ಟ್
ಹೊಸದಿಲ್ಲಿ, ಡಿ.2: ಬಡವರು ನೀಡುವ ದೂರಿನ ಕುರಿತು ಉದಾಸೀನ ತೋರುತ್ತಿರುವುದಕ್ಕಾಗಿ ದಿಲ್ಲಿ ಪೊಲೀಸರನ್ನು ದಿಲ್ಲಿ ಹೈಕೋರ್ಟ್ ತರಾಟೆಗೆತ್ತಿಕೊಂಡಿದೆ. ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವ್ಯಕ್ತಿಯೋರ್ವ ಸಲ್ಲಿಸಿದ್ದ ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಉದಾಸೀನ ತೋರಿದ ಪ್ರಕರಣದ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಪಿ.ಎಸ್.ತೇಜಿ ಅವರನ್ನೊಳಗೊಂಡ ನ್ಯಾಯಪೀಠವು, ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಿಲ್ಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿತು.
ಬಡವರ, ಜನಸಾಮಾನ್ಯರ ದೂರಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ವಿಷಾದನೀಯವಾಗಿದೆ. ಜನಸಾಮಾನ್ಯರಿಗೆ ಧ್ವನಿಯೇ ಎತ್ತಲಾಗದ ಪರಿಸ್ಥಿತಿಯಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಕಾವಲುಗಾರನಾಗಿ ದುಡಿಯುತ್ತಿರುವ, ತಿಂಗಳಿಗೆ ಕೇವಲ 8,000ದಿಂದ 9,000 ರೂ.ನಷ್ಟು ಸಂಬಳ ಪಡೆಯುವ ವ್ಯಕ್ತಿ ತನ್ನ ಪತ್ನಿ ನಾಪತ್ತೆಯಾಗಿರುವ ಬಗ್ಗೆ 2016ರಆಗಸ್ಟ್ನಲ್ಲಿ ಸಲ್ಲಿಸಿರುವ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ.
ಪೊಲೀಸರು ದೂರಿನ ಬಗ್ಗೆ ಶೀಘ್ರ ಕಾರ್ಯಾಚರಣೆ ನಡೆಸಿದ್ದಲ್ಲಿ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿತ್ತು. ಈ ದಂಪತಿಗೆ ಐದು ವರ್ಷದ ಮಗನಿದ್ದು , ಈ ಮಗು ತಾಯಿಯ ಪ್ರೀತಿಯಿಂದ ವಂಚಿತವಾಗಿದೆ. ಈ ಪರಿಸ್ಥಿತಿಗೆ ಪೊಲೀಸರ ಕಡೆಯಿಂದ ಆದ ಲೋಪವೂ ಕಾರಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ ಎಂಬ ಪೊಲೀಸರ ಹೇಳಿಕೆ ಕ್ಷುಲ್ಲಕ ನೆಪವಾಗಿದೆ ಎಂದ ನ್ಯಾಯಪೀಠ, ಸಪ್ದರ್ಜಂಗ್ ಎನ್ಕ್ಲೇವ್ ಪೊಲೀಸ್ಠಾಣಾಧಿಕಾರಿ ತಪ್ಪಿತಸ್ತ ಪೊಲೀಸರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿತು.
ಕೇವಲ ಶ್ರೀಮಂತರು, ಪ್ರಭಾವೀ ವ್ಯಕ್ತಿಗಳ ದೂರನ್ನು ಮಾತ್ರ ಪರಿಗಣಿಸುವುದಲ್ಲ, ಜನಸಾಮಾನ್ಯರು ಸಲ್ಲಿಸುವ ದೂರಿನ ಬಗ್ಗೆಯೂ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ಪೊಲೀಸ್ ಆಯುಕ್ತರಿಗೆ ನ್ಯಾಯಪೀಠ ಸೂಚಿಸಿತು.
ಪತ್ನಿ ಕಾಣೆಯಾಗಿರುವ ಬಗ್ಗೆ 2016ರ ಆಗಸ್ಟ್ನಲ್ಲಿ ಸಫ್ದರ್ಜಂಗ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವ ದೂರು ದಾಖಲಿಸಿದ್ದ. ಅಲ್ಲದೆ ತನ್ನ ಪತ್ನಿ ವ್ಯಕ್ತಿಯೋರ್ವನ ಜೊತೆ ತೆರಳಿರುವ ಶಂಕೆ ಇದೆ ಎಂದೂ ದೂರಿನಲ್ಲಿ ತಿಳಿಸಿದ್ದು ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ನೀಡಿದ್ದ.
ಇಷ್ಟಾದರೂ ದಿಲ್ಲಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಆ ವ್ಯಕ್ತಿ ನ್ಯಾಯಾಲಯವನ್ನು ಸಂಪರ್ಕಿಸಿದ ಬಳಿಕ , ಕಾಣೆಯಾದ ಮಹಿಳೆಯ ಶೋಧ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ನೀಡುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ಪೊಲೀಸರು ಆ ಮಹಿಳೆಯನ್ನು ಪತ್ತೆಹಚ್ಚಿದಾಗ ಆಕೆ ತಾನು ಸ್ವಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡಿದ್ದು ಮುಸ್ಲಿಂ ವ್ಯಕ್ತಿಯೊಡನೆ ಮದುವೆಯಾಗಿರುವುದಾಗಿ ತಿಳಿಸಿದ್ದಳು.
ತಾನು ಆ ವ್ಯಕ್ತಿಯೊಡನೆ ಬಾಳಲು ಇಚ್ಛಿಸುವುದಾಗಿ ಮಹಿಳೆ ತಿಳಿಸಿರುವ ಕಾರಣ, ಈ ವಿಷಯದಲ್ಲಿ ಯಾವುದೇ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೀಗ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದಾಗಿ ಅರ್ಜಿದಾರ ತಿಳಿಸಿದ್ದಾನೆ.