ನಾಲ್ವರು ಸಹೋದ್ಯೋಗಿಗಳನ್ನು ಕೊಂದ ಸಿಆರ್‌ಪಿಎಫ್ ಯೋಧ

Update: 2017-12-09 15:50 GMT

ಛತ್ತೀಸ್‌ಗಡ, ಡಿ.9: ಸಿಆರ್‌ಪಿಎಫ್ ಯೋಧನೋರ್ವ ಗುಂಡಿಕ್ಕಿ ನಾಲ್ವರು ಸಹೋದ್ಯೋಗಿಗಳನ್ನು (ಸಿಆರ್‌ಪಿಎಫ್ ಯೋಧರನ್ನು) ಹತ್ಯೆ ಮಾಡಿದ ಘಟನೆ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾನೆ. ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯ ಬಸಗುಡ್ಡದಲ್ಲಿ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಗೆ ನಿಯುಕ್ತಿಗೊಂಡಿರುವ ಸಿಆರ್‌ಪಿಎಫ್‌ನ 168ನೇ ಬೆಟಾಲಿಯನ್‌ನ ಶಿಬಿರದಲ್ಲಿ ಸಂಜೆ 5 ಗಂಟೆ ವೇಳೆಗೆ ಈ ಘಟನೆ ನಡೆದಿದೆ ಎಂದು ದಂತೇವಾಡ ವಲಯದ ಡಿಐಜಿ ಸುಂದರ್‌ರಾಜ್ ಪಿ ತಿಳಿಸಿದ್ದಾರೆ.

ಸಿಆರ್‌ಪಿಎಫ್ ಯೋಧ ಸನತ್‌ಕುಮಾರ್ ಎಂಬಾತ ಎಕೆ 47 ರೈಫಲ್ಸ್‌ನಿಂದ ಗುಂಡುಹಾರಿಸಿದಾಗ ಇಬ್ಬರು ಸಬ್‌ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಸಿಆರ್‌ಪಿಎಫ್ ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಮೃತಪಟ್ಟವರನ್ನು ವಿಕೆ ಶರ್ಮ, ಮೇಘ್ ಸಿಂಗ್, ರಾಜ್‌ವೀರ್ ಸಿಂಗ್ ಮತ್ತು ಶಂಕರ್ ರಾವ್ ಎಂದು ಗುರುತಿಸಲಾಗಿದೆ. ಗಜಾನಂದ್ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ನಲ್ಲಿ ರಾಯ್‌ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಗೂ ಮುನ್ನ ಶಿಬಿರದಲ್ಲಿದ್ದ ಯೋಧರ ಮಧ್ಯೆ ಜಗಳವಾಗಿದೆ ಎನ್ನಲಾಗಿದ್ದು, ಸಿಟ್ಟಿನಿಂದ ನಾಲ್ವರನ್ನು ಗುಂಡಿಕ್ಕಿ ಕೊಂದ ಸನತ ಕುಮಾರ್‌ನ ಮೇಲೆ ಮುಗಿಬಿದ್ದ ಇತರ ಯೋಧರು ಆತನನ್ನು ಹೆಡೆಮುರಿ ಕಟ್ಟಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News