'ಪ್ರಚಾರಕ್ಕಾಗಿ ಇಲಾಖೆಗಳಿಂದ ಖರ್ಚು ಮಾಡಿದ ಹಣದ ಶ್ವೇತಪತ್ರ ಹೊರಡಿಸಿ'

Update: 2017-12-21 15:51 GMT

ಮಂಗಳೂರು, ಡಿ.21: ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬರುತ್ತಿರುವುದು ಚುನಾವಣಾ ಪ್ರೇರಿತ ರಾಜಕೀಯ ಪ್ರವಾಸ ಎಂದು ದ.ಕ. ಜಿಲ್ಲಾ ಬಿಜೆಪಿ ಆರೋಪಿಸಿದೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಸರಕಾರದ ಚಿಹ್ನೆ ಬಳಸಿ ಕೋಟ್ಯಾಂತರ ರೂಪಾಯಿ ಗಳನ್ನು ಚುನಾವಣೆಗಾಗಿ ಸಿದ್ದರಾಮಯ್ಯನವರು ಖರ್ಚು ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರಚಾರಕ್ಕಾಗಿ ಇಲಾಖೆಗಳ ಮೂಲಕ ಖರ್ಚು ಮಾಡಲಾದ ಹಣದ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಲಿ ಎಂದು ಅವರು ಸವಾಲೆಸೆದರು.

ಪ್ರಧಾನಿ ನರೇಂದ್ರ ಮೋದಿಯರ ವಿದೇಶ ಪ್ರವಾಸದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಜೀವ ಮಠಂದೂರು, ಒಬ್ಬ ಪ್ರಧಾನಿ ದೇಶದ ಗೌರವ ಹೆಚ್ಚಿಸಲು ಆಮಂತ್ರದ ಮೇರೆಗೆ ವಿದೇಶ ಪ್ರವಾಸ ಮಾಡುತ್ತಾರೆ. ಮಾತ್ರವಲ್ಲದೆ ರಾಷ್ಟ್ರೀಯ ವಿಪತ್ತಿನ ಹಿನ್ನೆಲೆಯಲ್ಲಿ ಲಕ್ಷದ್ವೀಪ, ಕೇರಳ, ತಮಿಳುನಾಡು ಮೊದಲಾದೆಡೆ ಪರಿಹಾರ ಕಾರ್ಯಗಳಿಗಾಗಿ ಹೋಗಿದ್ದಾರೆ. ಲಕ್ಷದ್ವೀಪಕ್ಕೆ ತೆರಳಲು ಅವರು ಮಂಗಳೂರಿನಲ್ಲಿ ತಂಗಿದ್ದು, ಸಾಮಾನ್ಯ ಪ್ರಜೆಯಾಗಿ ಸರ್ಕ್ಯೂಟ್ ಹೌಸನ್ನು ಬಳಸಿಕೊಂಡಿದ್ದರು ಎಂದರು.

ಬಿಜೆಪಿಯ ಇತರ ನಾಯಕರು ಸಾಮಾನ್ಯ ಪ್ರಜೆಯಾಗಿ ಸರಕಾರಿ ಅತಿಥಿಗೃಹಗಳಲ್ಲಿ ಉಳಿದುಕೊಳ್ಳುವುದಿಲ್ಲ ಎಂಬ ಪ್ರಶ್ನೆಗೆ, ಈಗಾಗಲೇ ಈ ವಿಷಯದಲ್ಲಿ ಪ್ರಧಾನಿ ಮಾದರಿಯಾಗಿದ್ದು, ಉಳಿದವರೂ ಮುಂದೆ ಅದನ್ನು ಅನುಸರಿಸರಿಸುವ ವಿಶ್ವಾಸವಿದೆ ಎಂದರು.

ಗುಜರಾತ್ ಚುನಾವಣೆ ಬಳಿಕ ರಾಜ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಅದರ ಜತೆಯಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಬಂದು ಸಂಭ್ರಮಾಚರಣೆಯ ಮೂಲಕ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತ ಸಂಘಟನೆಗಳನ್ನು ಓಲೈಸುವ ಕೆಲಸ ಮಾಡುತ್ತಿದೆ. ಆ ಪಕ್ಷಕ್ಕೆ ಒಬ್ಬಂಟಿಯಾಗಿ ಸ್ಪರ್ಧಿಸುವ ಮನಸ್ಥಿತಿ ಇಲ್ಲದ ಕಾರಣ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಯ ಅಧ್ಯಕ್ಷರ ಜತೆ ಪಕ್ಷದ ರಾಜ್ಯಾಧ್ಯಕ್ಷರು ಮಾತುಕತೆ ನಡೆಸುತ್ತಿದ್ದಾರೆ. ಗುಜರಾತ್ ಚುನಾವಣೆಯ ವೇಳೆ ಪಾಕಿಸ್ತಾನದ ಜತೆ ಹಾಗೂ ಕಾಶ್ಮೀರಿ ಭಯೋತ್ಪಾದಕರ ಜತೆ ಮಾತುಕತೆ ಮಾಡಿದ್ದ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ಚುನಾವಣೆಗೆ ಯಾವುದಕ್ಕೂ ಹೇಸದಂತಿದೆ ಎಂದು ಅವರು ಆಪಾದಿಸಿದರು.

ಮಂಗಳೂರು ಉತ್ತರ ವಿಧಾನಸಭಾ ಶಾಸಕ ಮನೆಗೆ ಪೊಲೀಸ್ ಅಧಿಕಾರಿ ಹೋಗಿ ಸನ್ಮಾನ ಮಾಡಿ ತಾನು ಶಾಸಕರ ಅಡಿಯಾಳು ಎಂಬ ಮನೋಭಾವ ವನ್ನು ತೋರ್ಪಡಿಸಿರುವುದಲ್ಲದೆ, ಜೀ ಹುಝೂರ್ ಎಂಬ ಸಂಸ್ಕೃತಿ ಶಾಸಕ ಮನೆಯಿಂದಲೇ ಆರಂಭವಾದಂತಿದೆ ಎಂದು ಈ ಸಂದರ್ಭ ಸಂಜೀವ ಮಠಂದೂರು ಆಪಾದಿಸಿದರು.

ಈ ಬಗ್ಗೆ ಈಗಾಗಲೇ ಶಾಸಕರು ಸ್ಪಷ್ಟನೆ ನೀಡಿದ್ದಲ್ಲದೆ, ಸ್ಥಳೀಯ ಕಾರ್ಪೊರೇಟರ್ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎಂಬ ಪ್ರಶ್ನೆಗೆ, ನ್ಯಾಯಾಲಯಕ್ಕೆ ಹೋದರೆ ಸತ್ಯಾಂಶ ಹೊರ ಬೀಳಲಿದೆ ಎಂದರು.

ಸುರತ್ಕಲ್ ಮಾರುಕಟ್ಟೆ ವಿವಾದಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಡಾ. ಭರತ್ ಶೆಟ್ಟಿ, ನೂತನ ಮಾರುಕಟ್ಟೆಯ ಮಂಜೂರಾತಿ ಯೋಜನೆ ಬಗ್ಗೆ ಶಾಸಕರು ಇನ್ನೂ ಸ್ಪಷ್ಟಪಡಿಸಿಲ್ಲ. ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಕ್ಕೆ ಸಂಬಂಧಿಸಿ ಸೂಕ್ತ ವ್ಯವಸ್ಥೆಯನ್ನೂ ಕಲ್ಪಿಸಲಾಗಿಲ್ಲ. ಇದೆಲ್ಲಾ ಚುನಾವಣೆ ಆಗುವರೆಗಿನ ಗಿಮಿಕ್ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಮೋನಪ್ಪ ಭಂಡಾರಿ, ರವಿಶಂಕರ ಮಿಜಾರು, ವೇದವ್ಯಾಸ ಕಾಮತ್, ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News