ಒಖಿ ಚಂಡಮಾರುತ : 661 ಮಂದಿ ಇನ್ನೂ ನಾಪತ್ತೆ
Update: 2017-12-27 13:18 GMT
ಹೊಸದಿಲ್ಲಿ, ಡಿ.27: ಡಿಸೆಂಬರ್ ಆರಂಭದಲ್ಲಿ ದಕ್ಷಿಣ ಭಾರತದಲ್ಲಿ ಒಖಿ ಚಂಡಮಾರುತದ ಹಾವಳಿಗೆ ಸಿಲುಕಿದ್ದ 661 ಮಂದಿ ಮೀನುಗಾರರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದರು.
ಡಿ.20ರವರೆಗಿನ ಮಾಹಿತಿಯಂತೆ ನೌಕಾಪಡೆ, ವಾಯುಪಡೆ ಹಾಗೂ ತಟರಕ್ಷಣಾ ಪಡೆ ನಡೆಸಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ 821 ಮಂದಿಯನ್ನು ರಕ್ಷಿಸಲಾಗಿದೆ. ಸರಕು ನೌಕೆ ಸೇರಿದಂತೆ ಇತರ ನೌಕೆಯವರು 24 ಮಂದಿಯನ್ನು ರಕ್ಷಿಸಿದ್ದಾರೆ. ಹೀಗೆ ರಕ್ಷಿಸಲ್ಪಟ್ಟಿರುವ ಒಟ್ಟು 845 ಮಂದಿಯಲ್ಲಿ ತಮಿಳುನಾಡಿನ 453 , ಕೇರಳದ 362 ಹಾಗೂ ಲಕ್ಷದ್ವೀಪ ಮತ್ತು ಮಿನಿಕಾಯ್ ದ್ವೀಪದ 30 ಮಂದಿ ಸೇರಿದ್ದಾರೆ ಎಂದು ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು. ತಮಿಳುನಾಡಿನ 400 ಮಂದಿ, ಕೇರಳದ 261 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸಚಿವರು ತಿಳಿಸಿದರು.