ಭಟ್ಕಳ: ಅನಧಿಕೃತ ಮೀನುಗಾರಿಕೆಗೆ ವಿರೋಧಿಸಿ ಡಿಸಿಗೆ ಮನವಿ
ಭಟ್ಕಳ, ಜ.13: ಇಲ್ಲಿನ ಜಾಲಿ ಸಮುದ್ರತೀರದಲ್ಲಿ ಅನಧಿಕೃತವಾಗಿ ತಮಿಳುನಾಡು ಮತ್ತು ಕೇರಳ ಮೀನುಗಾರರು ನಡೆಸುತ್ತಿರುವ ಮೀನುಗಾರಿಕೆ ದಂಧೆಯನ್ನು ಶಾಶ್ವತವಾಗಿ ಬಂದ್ ಮಾಡಬೇಕೆಂದು ಆಗ್ರಹಿಸಿ ಗುರು ವಾರದಂದು ಇಲ್ಲಿನ ಜಾಲಿ ಭಾಗದ ಮೀನುಗಾರರು ಸಾರ್ವಜನಿಕರು ಜಿಲ್ಲಾಧಿ ಕಾರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಿದ್ದಾರೆ.
ಮನವಿಯಲ್ಲಿ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಲಿಕೋಡಿ ಸಮುದ್ರತೀರದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯ ಮೀನುಗಾರರು ತಮ್ಮ ರಾಜ್ಯದಲ್ಲಿ ನೋಂದಣಿ ಇರದ ಮೀನುಗಾರಿಕೆ ದೋಣಿಗಳನ್ನು ತಂದು ಅನಧಿಕೃತವಾಗಿ ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದಾರೆ. ಈ ದಂಧೆಗೆ ಸ್ಥಳಿಯ ರಾಜಕಾರಣಿಗಳು ಸಾಥ್ ನೀಡುತ್ತಿದ್ದು, ಇವರಿಗೆ ಇಲ್ಲಿ ಈ ಅನಧೀಕೃತವಾದ ದಂಧೆಯನ್ನು ರಾಜಾ ರೋಷವಾಗಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆಂಬ ಆರೋಪ ಮೀನುಗಾರರದ್ದಾಗಿದೆ.
ತಮಿಳುನಾಡು ಮತ್ತು ಕೇರಳ ರಾಜ್ಯದ ಮೀನುಗಾರರು ರಾತ್ರಿ ಹಗಲು ಎನ್ನದೇ ರಸ್ತೆಯಲ್ಲಿ ತಿರುಗಾಡುತ್ತಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಮೀನುಗಾರ ಮಹಿಳೆಯರಿಗೆ ಕಿರುಕುಳ ಆಗುತ್ತಿದೆ. ಅನಧೀಕೃತ ದೋಣಿಗಳಿಗೆ ಸ್ಥಳಿಯ ಪಡಿತರ ಅಂಗಡಿಗಳಿಂದ ಸೀಮೇಎಣ್ಣೆ ಪೂರೈಕೆ ನಿರಾಳವಾಗಿ ಆಗುತ್ತಿದೆ. ಹಾಗೂ ಬೊಂಡಾಸದಂತಹ ಮೀನು ಹಿಡಿಯಲು ಸರಕಾರ ನಿರ್ಬಂಧ ಹೇರಿದ್ದರೂ ಕೂಡ ಇವರು ಹಣದ ಆಸೆಗೆ ಮೀನುಗಳನ್ನು ಹಿಡಿಯುತ್ತಿದ್ದಾರೆಂದು ಆರೋಪಿಸಿದ್ದಾರೆ. ಹಾಗೂ ಇಲ್ಲಿನ ಸ್ಥಳಿಯ ಮೀನುಗಾರರ ಬಲೆಯ ಮೇಲೆ ದೋಣಿಯನ್ನು ಓಡಿಸಿ ಬಲೆಯನ್ನು ನಾಶ ಮಾಡುತ್ತಿದ್ದಾರೆ. ತಮ್ಮದೇ ಸರ್ವಾಧಿಕಾರ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದು ಸ್ಥಳಿಯ ಮೀನುಗಾರರಿಗೆ ನಷ್ಟ ಆಗುತ್ತಿದೆ.
ಹೀಗಾಗಿ ಈ ಅನಧಿಕೃತ ರೀತಿಯಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯದ ಮೀನುಗಾರರ ದೋಣಿಯನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಸಹಾಯಕ ಕಮಿಷನರ್ ಅನುಪಸ್ಥಿತಿಯಲ್ಲಿ ಕಚೇರಿ ಸಹಾಯಕ ಎಲ್.ಎ.ಭಟ್ಟ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದಭರ್ದಲ್ಲಿ ರಾಮ ನಾಂರಾಯಣ ಖಾರ್ವಿ, ರಾಮಾ ಎನ್. ಮೋಗೇರ, ಮಹೇಶ ಕೆ.ಮೋಗೇರ, ಕೃಷ್ಣ ಎನ್. ಖಾರ್ವಿ, ಈಶ್ವರ ಮೋಗೇರ, ಹರೀಶ .ಎಲ್. ನಾಯ್ಕ, ಶ್ರೀಧರ ಎನ್. ನಾಯ್ಕ, ಮೋಹನ ಎಮ್ .ನಾಯ್ಕ, ಪುಂಡಲೀಕ ಮೋಗೇರ, ಗಣಪತಿ ನಾಯ್ಕ ಮತ್ತಿತರ ಮೀನುಗಾರರು ಉಪಸ್ಥಿತರಿದ್ದರು.