ಭಟ್ಕಳ: ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

Update: 2018-01-18 05:54 GMT

ಭಟ್ಕಳ, ಜ. 18: ತಾಲೂಕಿನ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗಾರವಾಗಿದ್ದು ಸಾಕಷ್ಟು ವೈದ್ಯರಿದ್ದರೂ ಸಹ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ತಾಲೂಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು ತಾಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಹಲವಾರು ವರ್ಷಗಳಿಂದ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯು ಮೀತಿ ಮೀರಿದ್ದು, ಸದ್ಯಕ್ಕೆ ಇಲ್ಲಿ ರೋಗಿಗಳಿಗೆ ಚಿಕಿತ್ಸೆ ತಪಾಸಣೆ ಮಾಡಲು ಯಾವೊಬ್ಬ ವೈದ್ಯರಿಲ್ಲದೇ ಪರದಾಡಿದ ಸ್ಥಿತಿ ನಿರ್ಮಾಣ ಆಗಿದ್ದನ್ನು ಮನಗೊಂಡ ಸಾರ್ವಜನಿಕರು, ವಿವಿಧ ಸಂಘಟನೆಗಳ ಪ್ರಮುಖರು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ಬಂದ ಜಿಲ್ಲಾ ಆರೋಗ್ಯಾಧಿಕಾರಿ ಅಶೋಕರನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ದೂರಿ ಕೊಂಡರು ಸಹ ಕೇವಲ ಸುಳ್ಳು ಭರವಸೆಯನ್ನು ನೀಡಿ ಮೇಲಾಧಿಕಾರಿಗಳು ತೆರಳುತಿದ್ದುದ್ದು ಸಮಸ್ಯೆ ಪರಿಹಾರವಾಗುವ ಬದಲು ಇನ್ನಷ್ಟು ಉಲ್ಬಣಗೊಳ್ಳುತ್ತಿತ್ತು ಎನ್ನಲಾಗಿದೆ.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತಂತೆ ಜಯಕರ್ನಾಟಕ ಸಂಘದ ಸದಸ್ಯರು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ತಾಲೂಕು ವೈದ್ಯಾಧಿಕಾರಿಯ ನಿರ್ಲಕ್ಷ್ಯ ದಿಂದಾಗಿ ಇಡೀ ವ್ಯವಸ್ಥೇಯೆ ಹಾಳಾಗಿದ್ದು ಮೊದಲು ವೈದ್ಯಾಧಿಕಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿದರು ಎನ್ನಲಾಗಿದೆ.

ಇಲ್ಲಿನ ಆಸ್ಪತ್ರೆಯ ನಗು ಮಗುವಿನ ಆ್ಯಂಬುಲೆನ್ಸ್ ಹಾಗೂ ತುರ್ತು ಆ್ಯಂಬುಲೆನ್ಸ್ ನಲ್ಲಿ ಚಾಲಕರಿಗೆ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಉಚಿತವಾಗಿ ಕರೆದೊಯ್ಯಬೇಕೆ ಅಥವಾ ಡಿಸೇಲ್ ಚಾರ್ಜ್ ಹಣ ಪಡೆದುಕೊಳ್ಳಬೇಕೇ ಎಂಬ ಬಗ್ಗೆ ಇಲ್ಲಿನ ಆಸ್ಪತ್ರೆಯ ಮುಖ್ಯ ಆರೋಗ್ಯ ವೈದ್ಯಾಧಿಕಾರಿ ಸರಿಯಾಗಿ ಮಾಹಿತಿ ನೀಡದೇ ರೋಗಿಗಳಿಂದಲೇ ಹಣ ಪಡೆದು ಡಿಸೇಲ್ ಹಣ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ರೋಗಿಯೂ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಹಾಗೂ ತೀರಾ ಬಡವರಿದ್ದರೆ ಅಂತಹವರಿಗೆ ಉಚಿತವಾಗಿ ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯಬೇಕೆಂದು  ಚಾಲಕರಿಗೆ ಸೂಚನೆಯನ್ನು ನೀಡಿದಿರುವುದು ಅಧಿಕಾರಿಯ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಹಾಗೂ ಇಲ್ಲಿನ ಮುಖ್ಯ ಆರೋಗ್ಯಾಧಿಕಾರಿ ತಮ್ಮ ವೈಯಕ್ತಿಕ ವಿಚಾರಕ್ಕೆ ಆ್ಯಂಬುಲೆನ್ಸ್ ಬಳಸಿಕೊಂಡು ಈಗಾಗಲೇ 60 ಸಾವಿರ ಸರಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಸಂಘಟನೆಯಿಂದ ಆರೋಪಗಳು ಕೇಳಿ ಬಂದವು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು  ತಾಕೀತು ಮಾಡಿದರು.

ತಾಲೂಕಿನ ವ್ಯಾಪ್ತಿಯಲ್ಲಿ ಬಳಕೆಯಾಗಬೇಕಾದ ನಗುಮಗು ಆ್ಯಂಬುಲೆನ್ಸ್ ಜಿಲ್ಲೆಯಾದ್ಯಂತ ಅನಾವಶ್ಯಕ ವಿಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸಂಘಟನೆಯಿಂದ ಒತ್ತಡ ಹೇರಲಾಯಿತು. ಅದೇ ರೀತಿ ಇಲ್ಲಿನ ಆಸ್ಪತ್ರೆಯ ರಕ್ತ ಪರೀಕ್ಷಾ ಕೇಂದ್ರದ ರಕ್ತವನ್ನು ಖಾಸಗಿಯವರಿಗೆ ಮಾರಾಟ ಮಾಡಿ ಈ ಕೆಲಸಕ್ಕೆ ಓರ್ವ ಖಾಸಗಿ ಲ್ಯಾಬ್ ವ್ಯಕ್ತಿಯನ್ನು ನೇಮಿಸಿ ಅವ್ಯವಹಾರದಲ್ಲಿ ಓರ್ವ ವೈದ್ಯ ಹಾಗೂ ರಕ್ತ ಪರೀಕ್ಷಾ ಕೇಂದ್ರ ತಂತ್ರಜ್ಞನೂ ಶ್ಯಾಮಿಲಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದನ್ನು ಜಿಲ್ಲಾ ಆರೋಗ್ಯಾಧಿಕಾರಿಯ ಮುಂದಿಟ್ಟರು. ಈ ಬಗ್ಗೆ ಸೂಕ್ತ ದಾಖಲೆಯಿದ್ದರೆ ಆ ಮೂಲಕ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಭರವಸೆಯನ್ನು ನೀಡಿದರು. ಹಾಗೂ ಆಸ್ಪತ್ರೆಯಲ್ಲಿ ರೋಗಿಗಳು ಮಲಗುವ ಬೆಡ್‌ಗೆ ಹಾಕಲಾದ ಬಟ್ಟೆಯ ಸ್ವಚ್ಛತೆಯನ್ನು ಮಾಡದೇ ರೋಗಿಗಳು ಇನ್ನಷ್ಟು ರೋಗಕ್ಕೆ ತುತ್ತಾಗುವಂತೆ ಮಾಡುತ್ತಿದ್ದಾರೆ. ಮತ್ತು ಇಲ್ಲಿನ ಹಾಲಿ ಮುಖ್ಯ ಆರೋಗ್ಯಾಧಿಕಾರಿ ಅವರಿಗೆ ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುವ ಕ್ಷಮತೆ ಇಲ್ಲದ ಕಾರಣ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಿ ಸೂಕ್ತ ವೈದ್ಯರನ್ನು ಅವರ ಸ್ಥಾನಕ್ಕೆ ಭರ್ತಿ ಮಾಡಿ ಎಂಬ ಬಗ್ಗೆ ಜಯ ಕರ್ನಾಟಕ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರವರಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರ್ ಮಾತನಾಡಿ, ಆಸ್ಪತ್ರೆಯಲ್ಲಿ ಮುಖ್ಯವಾಗಿ ಆಡಳಿತ ವೈದ್ಯಾಧಿಕಾರಿ ಹಾಗೂ ಉಳಿದ ವೈದ್ಯರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಈ ಬಗ್ಗೆ ಪರಿಶೀಲನೆ ಮಾಡಿದ್ದು, ಹಾಲಿ ಇರುವ ಆಡಳಿತ ವೈದ್ಯಾಧಿಕಾರಿ ಯನ್ನು ಬದಲಿಸಿ 9 ಮಂದಿ ವೈದ್ಯರಲ್ಲಿ ಓರ್ವ ಸೂಕ್ತ ವೈದ್ಯರನ್ನು ಹಾಲಿ ಸ್ಥಾನಕ್ಕೆ ಸೇರ್ಪಡೆ ಮಾಡಿ ವ್ಯವಸ್ಥೆಯನ್ನು ಸರಿಪಡಿಸುತ್ತೇವೆ. ಆಸ್ಪತ್ರೆಯ ಬೆಡ್ ಸ್ವಚ್ಛತೆಯ ಬಗ್ಗೆ ಇವತ್ತಿನಿಂದಲೇ ಸರಿಪಡಿಸಿ ಸಮಸ್ಯೆ ಪರಿಹಾರ ಮಾಡುತ್ತೇವೆ. ಆಸ್ಪತ್ರೆಯಲ್ಲಾದ ಎಲ್ಲಾ ಅವ್ಯವಹಾರದ ಬಗ್ಗೆ ಕುದ್ದು ನಾನೇ ಬಂದು ಪರಿಶೀಲಿಸಿ ಸೂಕ್ತ ಕ್ರಮವನ್ನು ಜರುಗಿಸಲಾಗುವುದು. ಸಮಸ್ಯೆಯೂ ಆರೋಗ್ಯ ಸಚಿವರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ  ಜೊತೆಗೆ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತಿಳಿಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಯ ಕರ್ನಾಟಕ ರಕ್ಷಣಾ ಸಂಘ ತಾಲೂಕು ಅಧ್ಯಕ್ಷ ಸುಧಾಕರ ನಾಯ್ಕ ಮಾತನಾಡಿ , ತಾಲೂಕು ಆಸ್ಪತ್ರೆಯಲ್ಲಿ ಹಲವು ವರ್ಷದಿಂದ ಸಾಕಷ್ಟು ಸಮಸ್ಯೆ ಯಲ್ಲಿಯೇ ನಡೆದುಕೊಂಡು ಬಂದಿದ್ದು, ಬರುವಂತಹ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಈ ಹಿಂದೆ ಎರಡು ಬಾರಿ ಜಿಲ್ಲಾ ಆರೋಗ್ಯಾಧಿಕಾರಿ ಅವರ ಗಮನಕ್ಕು ಸಹ ತಂದಿದ್ದು ಸಮಸ್ಯೆಗೆ ಇತ್ಯರ್ಥ ಸಿಕ್ಕಿಲ್ಲವಾಗಿತ್ತು. ಆದರೆ ಸೋಮವಾರ ಯಾವೊಬ್ಬ ವೈದ್ಯರು ರೋಗಿಗಳ ತಪಾಸಣೆಗೆ ಇಲ್ಲದೇ ರೋಗಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಇನ್ನೂ ಗಮನ ನೀಡಿದೇ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂಬ ಎಚ್ಚರಿಕೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News