ಪಾರ್ಕಿಂಗ್ ಅತಿಕ್ರಮಣ ಶೀಘ್ರ ತೆರವು: ಮೇಯರ್ ಕವಿತಾ ಸನಿಲ್

Update: 2018-01-18 07:52 GMT

ಮಂಗಳೂರು, ಜ.18: ನಗರದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಿಸಿ ಕಟ್ಟಡ, ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿರುವುದನ್ನು ಗುರುತಿಸಲಾಗಿದ್ದು, ಶೀಘ್ರ ಅವುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಮಾಡಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ಗುರುವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಿಸಿರುವುದರಿಂದ ಸಂಚಾರದ ಸಮಸ್ಯೆ ಉದ್ಭವವಾಗಿದೆ. ಇದರಿಂದ ಸಾವಿರಾರು ಮಂದಿಗೆ ತೊಂದರೆಯೂ ಆಗಿದೆ. ಆ ಹಿನ್ನೆಲೆಯಲ್ಲಿ ಪಾರ್ಕಿಂಗ್ ಮೀಸಲಿಟ್ಟ ಸ್ಥಳಗಳನ್ನು ಅತಿಕ್ರಮಿಸಿರುವವರ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಅದರ ಆಧಾರದ ಮೇಲೆ ಕಾರ್ಯಾಚರಣೆ ಮಾಡಲಾಗುವುದು ಎಂದರು.

ನಗರದ ಸುಮಾರು 25ಕ್ಕೂ ಅಧಿಕ ಕಡೆ ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಿಸಿರುವುದು ಬೆಳಕಿಗೆ ಬಂದಿದೆ. ಕೆಲವರು ಕಟ್ಟಡ ನಿರ್ಮಿಸಿದ್ದರೆ ಇನ್ನು ಕೆಲವರು ಅಂಗಡಿ, ಹೊಟೇಲ್, ಬಾರ್, ಸ್ಕಿಲ್‌ಗೇಮ್ ಇತ್ಯಾದಿ ತೆರೆದಿದ್ದಾರೆ. ಈ ಬಗ್ಗೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಅವರಾಗಿಯೇ ತೆರವುಗೊಳಿಸಲು ಕಾಲಾವಕಾಶ ಕೊಡಲಾಗುವುದು. ಬಳಿಕವೂ ತೆರವುಗೊಳಿಸದಿದ್ದರೆ ಮನಪಾ ಕಾರ್ಯಾಚರಣೆ ಮಾಡಲಿದೆ ಎಂದು ಕವಿತಾ ಸನಿಲ್ ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. ವಿದ್ಯುತ್ ಸ್ಥಗಿತಕ್ಕೆ ಮೆಸ್ಕಾಂಗೆ ಸೂಚಿಸಲಾಗಿದೆ. ವ್ಯಾಪಾರ ಪರವಾನಿಗೆ ಪಡೆದಿದ್ದರೆ ಅದನ್ನೂ ರದ್ದುಗೊಳಿಸಲು ಕ್ರಮ ಜರಗಿಸಲಾಗುವುದು ಎಂದ ಮೇಯರ್ ಕವಿತಾ ಸನಿಲ್, ನಗರದ ಅಭಿವೃದ್ಧಿಯ ದೃಷ್ಟಿಯಿಂದ ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News