ಇಲ್ಯಾಸ್ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ: ಸಚಿವ ಖಾದರ್

Update: 2018-01-19 13:17 GMT

ಮಂಗಳೂರು, ಜ.19: ಹತ್ಯೆಗೀಡಾದ ಇಲ್ಯಾಸ್‌ ಮನೆಯವರ ದುಃಖದಲ್ಲಿ ನಾವೂ ಇದ್ದೇವೆ. ಇಲ್ಯಾಸ್‌ ಪತ್ನಿ ನನ್ನ ಸಹೋದರಿ ಸ್ಥಾನದಲ್ಲಿದ್ದು, ಅವರ ದುಃಖ ಅರ್ಥವಾಗುತ್ತದೆ. ನೈಜ ಆರೋಪಿಗಳ ಬಂಧನವಾದಾಗ ಅವರಿಗೂ ಸಮಾಧಾನ ಆಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮನೆಗೆ ಬರುತ್ತಿದ್ದ ಸಚಿವ ಖಾದರ್‌ರವರು ಈಗ ಎಲ್ಲಿದ್ದಾರೆ ಎಂದು ಇಲ್ಯಾಸ್‌ ಪತ್ನಿ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆ ಬಗ್ಗೆ ತನಗೆ ತಿಳಿದಿಲ್ಲ. ಮಾತ್ರವಲ್ಲದೆ ದು:ಖದ ಈ ಸಂದರ್ಭದಲ್ಲಿ ಆ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಾನು ಯಾರ ಬಳಿ ಹೋಗಬೇಕು, ಯಾರ ಸಹಕಾರ ಪಡೆಯುತ್ತೇನೆ, ಪಡೆದಿದ್ದೇನೆ ಎನ್ನುವುದು ನನ್ನ ಕ್ಷೇತ್ರದ ಸರ್ವರಿಗೂ ತಿಳಿದಿದೆ. ಇಲ್ಯಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆ ಜತೆಗೂ ಚರ್ಚೆ ನಡೆಸಲಾಗಿದೆ ಎಂದರು.

ಇಲ್ಯಾಸ್‌ ಪತ್ನಿಯ ಬಗ್ಗೆ ನನಗೆ ಅನುಕಂಪ ಇದೆ. ಆದರೆ ಈ ಪ್ರಕರಣದಲ್ಲಿ ರಾಜಕೀಯ ತರುವುದು ಬೇಡ. ದೀಪಕ್‌ ರಾವ್ ಹತ್ಯೆಯ ಸಂದರ್ಭ ಜೈಲಿನಲ್ಲಿದ್ದ ಇಲ್ಯಾಸ್‌ ನನ್ನು ಮಾಧ್ಯಮಗಳಲ್ಲಿ ಬಿಂಬಿಸಲಾಯಿತು. ಅದಾಗಲೇ ಪೊಲೀಸರು ಬಂಧಿಸಿದ್ದ ನೈಜ ಆರೋಪಿಗಳನ್ನು ಮರೆಮಾಚಲಾಯಿತು ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News