ಭೀಕರ ರಸ್ತೆ ಅಪಘಾತಕ್ಕೆ ತಾಯಿ-ಮಗಳು ಬಲಿ, ನಾಲ್ವರು ಗಂಭೀರ

Update: 2018-01-21 05:57 GMT

ಕಾಸರಗೋಡು, ಜ.21: ಸರಕು ಸಾಗಾಟದ ಲಾರಿ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಮೃತ ಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಪೊಯಿನಾಚಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತಪಟ್ಟವರನ್ನು ಚಟ್ಟಂಚಾಲ್ ಬೆಂಡಿಚ್ಚಾಲ್ ಕನಿಯ ಕುಂಡದ ರಾಜ ಎಂಬವರ ಪತ್ನಿ ಶೋಭಾ(32) ಮತ್ತು ಅವರ ಪುತ್ರಿ ವಿಸ್ಮಯಾ(8) ಎಂದು ಗುರುತಿಸಲಾಗಿದೆ.

ರಾಜ  (37), ಆಟೋ ರಿಕ್ಷಾ ಚಾಲಕ ಕನಿಯಕುಂಡದ ಅಬ್ದುಲ್ ಖಾದರ್(45) ಹಾಗೂ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಲಾರಿ ಚಾಲಕ ಹೊರತುಪಡಿಸಿ ಉಳಿದವರ ಸ್ಥಿತಿ ಗಂಭೀರವಾಗಿದೆ.

ಕಾಞ೦ಗಾಡ್ ನಿಂದ ಮಂಗಳೂರಿಗೆ ರಬ್ಬರ್ ಶೀಟ್  ಹೇರಿಕೊಂಡು ತೆರಳುತ್ತಿದ್ದ ಲಾರಿ ಹಾಗೂ ಪುಲ್ಲೂರು ಕಡೆಗೆ ತೆರಳುತ್ತಿದ್ದ ರಿಕ್ಷಾ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಲಾರಿ ಮಗುಚಿ ಆಟೋ ರಿಕ್ಷಾದ ಮೇಲೆ ಬಿದ್ದಿದೆ. ಈ ವೇಳೆ ರಿಕ್ಷಾದೊಳಗೆ ಸಿಲುಕಿಕೊಂಡಿದ್ದ ಶೋಭಾ ಮತ್ತು ವಿಸ್ಮಯಾ ಸ್ಥಳದಲ್ಲೇ ಮೃತಪಟ್ಟಿದ್ದರೆನ್ನಲಾಗಿದೆ. ರಿಕ್ಷಾದಿಂದ ಹೊರಗೆಸೆಯಲ್ಪಟ್ಟಿದ್ದ ರಾಜ ಮತ್ತು ಆಟೋ ಚಾಲಕ ಅಬ್ದುಲ್ ಖಾದರ್ ಗಂಭೀರ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿದ್ಯಾನಗರ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಮತ್ತು ನಾಗರಿಕರು ಗಾಯಾಳುಗಳ ರಕ್ಷಣಾ ಕಾರ್ಯಾಚರಣೆಗೆ ನೆರವಾದರು. ಅಪಘಾತದ ಬಳಿಕ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News