ವಿಧಾನಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನ: ಸಹ್ಯಾದ್ರಿ ಸಂಚಯ

Update: 2018-01-23 11:22 GMT

ಮಂಗಳೂರು, ಜ. 23: ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಬರಿದುಗೊಳಿಸುವ ಎತ್ತಿನಹೊಳೆಯಂತಹ ಮಾರಕ ಯೋಜನೆಗಳನ್ನು ಭವಿಷ್ಯದಲ್ಲಿ ಜಾರಿಗೊಳಿಸುವಾಗ ಜನಪ್ರತಿನಿಧಿಗಳು ಆಲೋಚನೆ ಮಾಡುವಂತಾಗಬೇಕು. ಅದಕ್ಕಾಗಿ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಲಾಗಿದೆ ಎಂದು ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್ ಹೊಳ್ಳ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸೂಕ್ತ ಅಭ್ಯರ್ಥಿ ದೊರೆಯದಿದ್ದಲ್ಲಿ ನೋಟಾ ಅಭಿಯಾನದ ಮೂಲಕ ಪ್ರತಿರೋಧ ಒಡ್ಡಲಾಗುವುದು. ನಮ್ಮ ಅಭಿಯಾನದ ಫಲವಾಗಿ ಕಳೆದ ಸಂಸತ್ ಚುನಾವಣೆಯಲ್ಲಿ 7800 ನೋಟಾ ಮತಗಳು ಚಲಾವಣೆಯಾಗಿದ್ದವು. ಕಳೆದ ಪಂಚಾಯತ್ ಚುನಾವಣೆಯಲ್ಲಿ 28 ಸಾವಿರ ಮತಗಳು ಬಿದ್ದಿದ್ದವು. ಈ ಬಾರಿ ಇನ್ನೂ ಅಧಿಕ ಮತಗಳು ದೊರೆಯುವ ನಿರೀಕ್ಷೆಯಿದೆ ಎಂದು ದಿನೇಶ್ ಹೊಳ್ಳ ಹೇಳಿದರು.

ಸೂಕ್ತ ಅಭ್ಯರ್ಥಿ ದೊರೆತರೆ ಜಿಲ್ಲೆಯ 2,3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪಕ್ಷೇತರರನ್ನಾಗಿ ನಿಲ್ಲಿಸುತ್ತೇವೆ. ಇದು ಕೂಡ ಎತ್ತಿನಹೊಳೆ ವಿರೋಧಿ ಹೋರಾಟದ ಭಾಗವೇ ಆಗಿದೆ. ನಮ್ಮ ಅಭ್ಯರ್ಥಿಗಳಿಗೆ ದೊರೆಯುವ ಮತಗಳು ನಿರ್ಣಾಯಕ ಮತಗಳಾಗಿ ಪರಿವರ್ತನೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓಟು ಕೇಳಲು ಮನೆಗೆ ಬರಬೇಡಿ !

ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಚುನಾವಣೆಯಲ್ಲಿ ನೋಟಾ ಮತ ಚಲಾವಣೆ ಅಭಿಯಾನದ ಭಾಗವಾಗಿ ವಿನೂತನ ಕಾರ್ಯತಂತ್ರಕ್ಕೆ ಸಹ್ಯಾದ್ರಿ ಸಂಚಯ ಮುಂದಾಗಿದೆ. ಜಿಲ್ಲೆಯ ಮನೆಗಳ ಗೇಟ್‌ಗೆ ‘ನೇತ್ರಾವತಿಯನ್ನು ರಕ್ಷಿಸಲಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಯಾವುದೇ ರಾಜಕಾರಣಿಗಳು ಮತ ಕೇಳಲು ಬರಬೇಡಿ, ನಿಮಗೆ ನಮ್ಮ ಮತ ಬಹಿಷ್ಕಾರ ಮತ್ತು ಧಿಕ್ಕಾರ’ ಎಂಬ ಒಕ್ಕಣೆಯುಳ್ಳ ಬೋರ್ಡ್ ಅಳವಡಿಸಲಾಗುವುದು. ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ನೀಡಲಾಗುವುದು ಎಂದು ದಿನೇಶ್ ಹೊಳ್ಳ ತಿಳಿಸಿದರು.

ಪಶ್ಚಿಮ ಘಟ್ಟದಲ್ಲಿ ಸಾಮಾನ್ಯವಾಗಿ ಮಾರ್ಚ್ ನಂತರ ಬೀಳುತ್ತಿದ್ದ ಬೆಂಕಿ ಈ ಬಾರಿ ಡಿಸೆಂಬರ್‌ನಲ್ಲೇ ಬಿದ್ದಿದೆ. ಇಂತಹ ಕೃತ್ಯಗಳ ಹಿಂದೆ ಗಾಂಜಾ, ಎಸ್ಟೇಟ್ ಮಾಫಿಯಾಗಳ ಕೈವಾಡವಿದೆ. ಘಟ್ಟದುದ್ದಕ್ಕೂ ಇರುವ ದೊಡ್ಡೇರಿಬೆಟ್ಟ, ರಾಮನ ಬೆಟ್ಟ, ಸೊಪ್ಪಿನಬೆಟ್ಟ, ಬಾರಿಮಲೆ, ಬಂಜಾರಮಲೆ, ಸೋಮನಕಾಡು, ಅಳಿಯೂರು, ವೆಂಕಟಗಿರಿ, ಅರಮನೆಗುಡ್ಡ ಪ್ರದೇಶಗಳಲ್ಲಿ ಸಹಸ್ರಾರು ಎಕರೆ ಜಾಗ ಈ ಮಾಫಿಯಾಗಳ ಕೈಯಲ್ಲಿದೆ. ಅರಣ್ಯ ಇಲಾಖೆಗೆ ನಿಯಂತ್ರಿಸಲು ಸಾಧ್ಯವಾಗದಷ್ಟು ದೊಡ್ಡ ಮಾಫಿಯಾ ಅಲ್ಲಿ ಕಾರ್ಯಾಚರಿಸುತ್ತಿವೆ. ನಿತ್ಯ ಅರಣ್ಯ ಬೇಟೆ ನಡೆಯುತ್ತಿದೆ. ಸಂರಕ್ಷಿತ ಅರಣ್ಯಗಳಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವುಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳನ್ನು ಸಚಿವರು ವರ್ಗಾವಣೆ ಮಾಡುತ್ತಿದ್ದಾರೆ ಎಂದು ಹೊಳ್ಳ ಆರೋಪಿಸಿದರು.

ಭಾವನೆಗಳೇ ಇಲ್ಲದ ಅರಣ್ಯ ಇಲಾಖೆ !

ಅರಣ್ಯ ಇಲಾಖೆ ಭಾವನೆಗಳೇ ಇಲ್ಲದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅರಣ್ಯಕ್ಕೆ ಬೆಂಕಿ ಬಿದ್ದಾಗ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಅನುಕೂಲ ವಾಗುವಂತೆ ಹೆಲಿಕಾಪ್ಟರ್ ಬೇಡಿಕೆಯನ್ನು ಅರಣ್ಯ ಸಚಿವರ ಮುಂದಿಟ್ಟರೆ ‘ನಮ್ಮ ದೇಶ ಶ್ರೀಮಂತ ದೇಶವಲ್ಲ’ ಎಂದು ಹಾಸ್ಯ ಮಾಡುತ್ತಾರೆ. ಆನೆಗಳನ್ನು ಸಾಕಲು ಆಗದ ಇಲಾಖೆ ದಿವಾಳಿಯಾಗಿದೆ. ಅವುಗಳನ್ನು ಜೀತದಾಳುಗಳಾಗಿ ದುಡಿಸಲಾಗುತ್ತದೆ. ಆನೆಗಳನ್ನು ಸಾಕಲಾಗುತ್ತಿಲ್ಲ ಎನ್ನುವ ಅರಣ್ಯ ಇಲಾಖೆಯನ್ನು ಮಾಫಿಯಾಗಳು ನಿಯಂತ್ರಿಸುತ್ತಿವೆ. ಪ್ರಾಮಾಣಿಕ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಶಶಿಧರ್ ಶೆಟ್ಟಿ ಆರೋಪಿಸಿದರು.
ಪ್ರಮುಖರಾದ ಶಶಿಧರ ಶೆಟ್ಟಿ, ರಾಜೇಶ್ ದೇವಾಡಿಗ, ಪವನ್, ಹರೀಶ್ ಅಡ್ಯಾರ್, ಜಗದೀಶ್ ಸಾಲ್ಯಾನ್ ಮತ್ತಿತರರಿದ್ದರು.

ನಕ್ಸಲ್ ಭೀತಿ ಹುಟ್ಟಿಸಿ ಅರಣ್ಯ ಲೂಟಿ !

ಪಶ್ಚಿಮ ಘಟ್ಟದಲ್ಲಿ ರೆಸಾರ್ಟ್ ಮಾಫಿಯಾದಂತೆಯೇ ಗಾಂಜಾ ಮಾಫಿಯಾ ಕೂಡ ಬೇರೂರಿದೆ. ನೂರಾರು ಎಕರೆ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಲಾಗುತ್ತಿದೆ. ಅಲ್ಲದೆ ಕಾಡುಕೋಣ ಬೇಟೆ ಅವ್ಯಾಹತವಾಗಿದೆ. ಅಲ್ಲಿಗೆ ಜನರು, ಹೊರಗಿನ ಚಾರಣಿಗರು ಹೋಗದಂತೆ ಭಯ ಹುಟ್ಟಿಸುವ ಕೆಲಸಕ್ಕೆ ಮಾಫಿಯಾಗಳು ನಡೆಸುತ್ತಿವೆ. ಇತ್ತೀಚೆಗೆ ಅಡ್ಡಹೊಳೆಗೆ ನಕ್ಸಲೀಯರು ಬಂದಿದ್ದರು ಎನ್ನುವ ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ಯಾವ ನಕ್ಸಲರೂ ಅಲ್ಲಿಗೆ ಬರಲಿಲ್ಲ. ಇದೆಲ್ಲ ಗಾಂಜಾ ಮಾಫಿಯಾಗಳು ಜನರಲ್ಲಿ ಭಯ ಹುಟ್ಟಿಸಲು ಎಸಗಿದ ಕೃತ್ಯ ಎಂದು ದಿನೇಶ್ ಹೊಳ್ಳ ಆರೋಪಿಸಿದರು.

ಜ. 26ರಂದು ಸಹ್ಯಾದ್ರಿ ಸಂಚಯದಿಂದ ಕಾನನ ರೋದನ

ಪಶ್ಚಿಮ ಘಟ್ಟ ಹೊತ್ತಿ ಉರಿಯುತ್ತಿದ್ದು, ನದಿ ಮೂಲಗಳು ಬರಡಾಗುತ್ತಿವೆ. ನೇತ್ರಾವತಿ ಬರಿದಾಗುತ್ತಿದೆ. ಆದರೆ ಸರಕಾರ ಕಾಡನ್ನು ರಕ್ಷಿಸುವುದನ್ನು ಬಿಟ್ಟು ಇರುವ ಕಾಡನ್ನೂ ಅಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಮೂಲಕ ಸರಕಾರದ ಗಮನ ಸೆಳೆಯಲು ಜ. 26ರಂದು ಸಹ್ಯಾದ್ರಿ ಸಂಚಯವು ಕಾನನ ರೋದನ ಎಂಬ ವಿಭಿನ್ನ ಪ್ರತಿಭಟನೆಯನ್ನು ಆಯೋಜಿಸಿದೆ.

ಅಂದು ಬೆಳಗ್ಗೆ 10.15ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಈ ಪ್ರತಿಭಟನೆ ನಡೆಯಲಿದೆ. ಹಸಿರು ಮತ್ತು ಕಪ್ಪು ಬಣ್ಣದ ಮುಖವಾಡ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಜಾತಿ, ಮತ ಭೇದವಿಲ್ಲದೆ ಸಾರ್ವಜನಿಕರು ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದು ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News