ಉಡುಪಿ: ಜ.30 ರಿಂದ ಸ್ಪರ್ಶ ಕುಷ್ಠ ಅರಿವು ಆಂದೋಲನ
ಉಡುಪಿ, ಜ.23: ಜಿಲ್ಲೆಯಲ್ಲಿ ಸ್ಪರ್ಶ ಕುಷ್ಠ ಅರಿವು ಆಂದೋಲನ ಜ.30 ರಿಂದ ಫೆ.13ರವೆರೆಗೆ ನಡೆಯಲಿದ್ದು, ಕಾಯಿಲೆ ಬಗ್ಗೆ ಪರಿಣಾಮಕಾರಿ ಅರಿವು ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಈಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲೆಲ್ಲಿ ಕುಷ್ಠರೋಗ ಕಾಯಿಲೆ ವರದಿಯಾಗಿವೆ ಆ ಪ್ರದೇಶಗಳನ್ನು ಕೇಂದ್ರೀಕರಿಸಿ ಕ್ರಿಯಾ ಯೋಜನೆ ರೂಪಿಸಿ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 19 ಪ್ರಕರಣಗಳು ಪತ್ತೆಯಾಗಿದ್ದು, 15 ಎಂಬಿ ಮತ್ತು 4 ಪಿಬಿ ಪ್ರಕರಣಗಳು ಎಂದು ಜಿಲ್ಲಾ ಕುಷ್ಠ ರೋಗಾಧಿಕಾರಿ ಡಾ. ಚಿಂಬಾಳ್ಕರ್ ವಿವರಿಸಿದರು. ಕಳೆದ ಸಾಲಿನಲ್ಲಿ 40 ಪ್ರಕರಣಗಳು ವರದಿ ಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸಂಖ್ಯೆ ಕಡಿಮೆಯಾಗಿದೆ. ಆದರೆ ಕಾಯಿಲೆ ಪತ್ತೆ ಹಾಗೂ ಚಿಕಿತ್ಸೆ ನೀಡುವುದು ಹಲವು ಕಾರಣಗಳಿಂದ ಸವಾಲಾಗಿ ಪರಿಣಮಿಸಿದೆ ಎಂದರು.
ಕಾಯಿಲೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ಅಧ್ಯಕ್ಷರ ಮೂಲಕ ಹಾಗೂ ಗ್ರಾಮಸಭೆಗಳ ಮೂಲಕ ರೋಗದ ಬಗ್ಗೆ ಅರಿವು ಮೂಡಿಸುವ ಯೋಜನೆಗಳನ್ನು ರೂಪಿಸಲಾಗಿದೆ. ರೋಗ ಪತ್ತೆ ಸವಾಲಾಗಿದ್ದು, ಸಮಗ್ರವಾಗಿ ರೋಗ ತಪಾಸಣೆ ನಡೆಸುವುದರಿಂದ ರೋಗ ನಿರ್ಮೂಲನೆ ಸಾಧ್ಯ ಎಂದು ಡಾ ಚಿಂಬಾಳ್ಕರ್ ವಿವರಿಸಿದರು.
ರೋಗ ಸಂಬಂಧ ಮಾಹಿತಿ ಶಿಕ್ಷಣ ನಿರಂತರವಾಗಿ ನಡೆಯುತ್ತಿದ್ದು, ರೋಗ ಪತ್ತೆಯಿಂದ ರೋಗ ತಡೆ ಸಾಧ್ಯವಾಗಿದೆ. ಗಂಗೊಳ್ಳಿ, ಶಿರೂರು, ಬಸ್ರೂರು ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ಈ ರೋಗ ಪತ್ತೆಯಾಗುತ್ತಿದೆ. ಸ್ತ್ರೀ ಶಕ್ತಿ ಅವರಿಗೆ ಮೆಡಿಕಲ್ ಆಫೀಸರ್ಗಳ ಮೂಲಕ ಮಾಹಿತಿ, ತಾಯಂದಿ ಸಭೆಗೆ ಮಾಹಿತಿ ನೀಡಲಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆಯಿದ್ದವರಿಗೆ ಗಾಳಿಯ ಮೂಲಕ ಕಾಯಿಲೆ ಹರಡುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತ ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ವಿವರಿಸಿದರು. ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.