ಮತ್ತೊಮ್ಮೆ ಕುಸಿದ ಅಧಿಕಾರಿ ಸುಂದರ ಪೂಜಾರಿ!
ಮಂಗಳೂರು, ಜ.28: ಉಪ ಲೋಕಾಯುಕ್ತರ ವಿಚಾರಣೆ ಸಂದರ್ಭ ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಅವರು ಹಠಾತ್ ಕುಸಿದು ಬೀಳುವ ಮೂಲಕ ಮತ್ತೊಮ್ಮೆ ಸುದ್ದಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಇಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿಯವರು ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಸಾರ್ವಜನಿಕರ ಅಹವಾಲಿಗೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿಯವರಿಂದ ಉಪ ಲೋಕಾಯುಕ್ತರು ವಿವರಣೆ ಬಯಸಿದರು. ಅದರಂತೆ ಎದ್ದು ನಿಂತು ಮಾಹಿತಿ ನೀಡುತ್ತಿದ್ದ ಸುಂದರ ಪೂಜಾರಿ ಹಠಾತ್ ಕುಸಿದರು. ಕೂಡಲೇ ಪಕ್ಕದಲ್ಲಿದ್ದ ಅಧಿಕಾರಿಗಳು ಅವರಿಗೆ ಆಸರೆಯಾದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಹಿಂದೆಯೂ ಎರಡು ಬಾರಿ ಇದೇ ರೀತಿ ಅವರು ಇದೇ ರೀತಿ ಕುಸಿದು ಸುದ್ದಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಹಾಗೂ ಅತ್ಯಾಚಾರ ನಿಯಂತ್ರಣ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರು ಮಂಗಳೂರಿನಲ್ಲಿ ಸಭೆ ನಡೆಸಿದ ವೇಳೆ ಈ ಘಟನೆ ನಡೆದಿದ್ದವು. ಎರಡೂ ಬಾರಿಯೂ ಉಗ್ರಪ್ಪ ಅವರ ಪ್ರಶ್ನಿಸಿದ ವೇಳೆ ಸುಂದರ ಪೂಜಾರಿ ಇದೇ ರೀತಿ ಕುಸಿದು ಆಸ್ಪತ್ರೆ ಸೇರಿದ್ದರು.