ಫೆ.18-25: ಕುಡುಪು ದೇವಳದಲ್ಲಿ ಬ್ರಹ್ಮಕಲಶೋತ್ಸವ

Update: 2018-02-03 16:16 GMT

ಮಂಗಳೂರು, ಫೆ.3: ಇತಿಹಾಸ ಪ್ರಸಿದ್ಧ ಕ್ಷೇತ್ರ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನಾ ಕ್ಷೇತ್ರವಾಗಿರುವ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆ.18ರಿಂದ ಫೆ. 25ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ವಾಸ್ತು ತಜ್ಞ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೆ.ಕೃಷ್ಣರಾಜ ತಂತ್ರಿ ತಿಳಿಸಿದರು.

ಕ್ಷೇತ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ. 25ರಂದು ಅನಂತ ಪದ್ಮನಾಭ ದೇವರಿಗೆ ಈ ಶತಮಾನದ ವೈಭವದ ಬ್ರಹ್ಮಕಲಶಾಭಿಷೇಕ ಬೆಳಗ್ಗೆ 6:45ರಿಂದ 7:45ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಪ್ರಗತಿಯಲ್ಲಿದೆ ವಿವಿಧ ಕಾಮಗಾರಿಗಳು

ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮೋದಿಸಲ್ಪಟ್ಟ 21 ಜನರ ಜೀರ್ಣೋದ್ಧಾರ ಸಮಿತಿ ಅಸ್ತಿತ್ವದಲ್ಲಿದೆ. ಈಗಾಗಲೇ 1.75 ಕೋಟಿ ರೂ. ವೆಚ್ಚದಲ್ಲಿ ನೂತನ ಶಿಲಾಮಯ ದಾರು ಶಿಲ್ಪವನ್ನು ಒಳಗೊಂಡ ರಾಜ್ಯದಲ್ಲಿಯೇ ಅತ್ಯಂತ ಅಪರೂಪವೆನಿಸಿದ ಚತುರಶ್ರಾಕಾರಾದ ನೂತನ ಗರ್ಭಗುಡಿ ದೇವರಿಗೆ ಅರ್ಪಣೆಗೊಂಡಿದೆ ಎಂದರು. ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಎಲ್ಲೂ ಇರದ ಭೂಪುರ ಆಕೃತಿಯ ಭದ್ರಾ ಸರಸ್ವತಿ ತೀರ್ಥ ಸರೋವರ ವಿಶೇಷ ಕೆಂಪು ಕಲ್ಲಿನ ಗೋಡೆಯಿಂದ ನಿರ್ಮಾಗೊಂಡು ದೇವರಿಗೆ ಅರ್ಪಣೆಯಾಗಿದೆ. 60 ಲಕ್ಷ ರೂ. ವೆಚ್ಚದ ವಿಶೇಷ ವಿನ್ಯಾಸದ ಶಿಲಾ ಆದಿಷ್ಠಾನ, ಕೆಂಪು ಕಲ್ಲಿನ ಗೋಡೆ ಹಾಗೂ ಹಿತ್ತಾಳೆಯ ಮುಚ್ಚಿಗೆ ಇರುವ ನೂತನ ದೈವಸ್ಥಾನ ದೇವಳದಲ್ಲಿ ಅರ್ಪಣೆಯಾಗಿದೆ.

ಪ್ರಸ್ತುತ 4 ಕೋಟಿ ರೂ. ವೆಚ್ಚದಲ್ಲಿ ನೂತನ ಶಿಲಾ ಆದಿಷ್ಠಾನ, ವಿಶೇಷ ಕೆತ್ತನೆಯ ಕೆಂಪುಕಲ್ಲಿನ ಗೋಡೆ ಹಾಗೂ ನಾಲ್ಕು ಸುತ್ತಲೂ ತಾಮ್ರದ ಮುಚ್ಚಿಗೆ ಇರುವ ಹೊಂದಿಗೆ ಸುತ್ತು ಪೌಳಿಯ ಎದುರು ಗೋಪುರವು ತಿರುವಾಂಕೂರು ಶೈಲಿಯ ಕುದುರೆ ಮಾಳಿಗೆಯನ್ನು ಹೊಂದಿದ್ದು, ಅತೀ ವಿಶಿಷ್ಟ ಹಾಗೂ ಅಪರೂಪದ ದೇವಾಲಯವಾಗಿ ಕಂಗೊಳಿಸಲಿದೆ. 65 ಲಕ್ಷ ರೂ. ವೆಚ್ಚದಲ್ಲಿ ಪೂರ್ವದಿಕ್ಕಿನ ಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಂಡು ದೇವರಿಗೆ ಅರ್ಪಣೆಯಾಗಿದೆ.

ಇದಲ್ಲದೆ ಸುಮಾರು 1.35 ಕೋಟಿ ರೂ. ವೆಚ್ಚದಲ್ಲಿ ಇತರ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಮುಂದಿನ ಯೋಜನೆಯಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಉತ್ತರ ದಿಕ್ಕಿನ ಗೋಪುರ ನಿರ್ಮಾಣ ಹಾಗೂ ನಾಗಬನದ ನವೀಕರಣ ಕಾರ್ಯ ಜರುಗಲಿದೆ ಎಂದು ಅವರು ವಿವರ ನೀಡಿದರು.

ಬ್ರಹ್ಮಕಲಶೋತ್ಸವದ ಅಂಗವಾಗಿ ಈ ದಿನಗಳಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆಯು ಸುಮಾರು 4 ಕೇಂದ್ರ ಸ್ಥಾನಗಳಿಂದ ಹಾಗೂ 30 ಉಪಕೇಂದ್ರಗಳಿಂದ ಫೆ.18, ಫೆ. 20, ಫೆ. 22ರಂದು ದೇವರಿಗೆ ಸಮರ್ಪಣೆಗೊಳ್ಳಲಿದೆ ಎಂದು ಅವರು ಹೇಳಿದರು.

ವಾಹನ ನಿಲುಗಡೆಗೆ ವಿಶೇಷ ಒತ್ತು!

 ಕುಡುಪು ದೇವಳದಲ್ಲಿ ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ ಆಗಮಿಸುವ ಭಕ್ತರಿಗೆ ವಾಹನ ನಿಲುಗಡೆಯ ಸಮಸ್ಯೆಯನ್ನು ಮನಗಂಡು ಈ ಬಾರಿ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಮಂಗಳೂರಿನಿಂದ ಬರುವ ಭಕ್ತರಿಗೆ ದೇವಸ್ಥಾನ ಬಳಿಯ ಸೇತುವೆ ಸಮೀಪದ ಎನ್‌ಎಂಪಿಟಿಯ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ಕಳ, ಮೂಡುಬಿದಿರೆಯಿಂದ ವಾಮಂಜೂರು ಮಾರ್ಗವಾಗಿ ಬರುವವರಿಗೆ ಮಂಗಳಜ್ಯೋತಿ ಶಾಲೆ ಬಳಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ವಾಸುದೇವ ರಾವ್ ಕುಡುಪು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಚಂದ್ರಹಾಸ ರೈ, ಮೊಕ್ತೇಸರ ಭಾಸ್ಕರ ಕೆ., ಅಧ್ಯಕ್ಷ ಕೆ.ಸುದರ್ಶನ ಕುಡುಪು, ಪ್ರಧಾನ ಕಾರ್ಯದರ್ಶಿ ಕೆ. ಸುಜನ್‌ದಾಸ್ ಕುಡುಪು, ಅನ್ನ ಸಂತರ್ಪಣಾ ಸಮಿತಿಯ ಪ್ರಧಾನ ಸಂಚಾಲಕ ಶೆಡ್ಡೆ ಮಂಜುನಾಥ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಅನುವಂಶಿಕ ಮೊಕ್ತೇಸರ ಕೆ. ಬಾಲಕೃಷ್ಣ ಕಾರಂತ, ಪ್ರಭಾಕರ ಭಟ್, ಮಾಧ್ಯಮ ಸಮಿತಿಯ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News