ವಿಶ್ವಕಪ್ ಗೆಲ್ಲಲು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ: ದ್ರಾವಿಡ್
Update: 2018-02-03 18:21 GMT
ವೆಲ್ಲಿಂಗ್ಟನ್, ಫೆ.3: ‘‘ನನಗೆ ಹುಡುಗರ ಪ್ರಯತ್ನದ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ಈ ಪ್ರತಿಭಾವಂತ ಕ್ರಿಕೆಟಿಗರು ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಮರಣೀಯ ಸಾಧನೆ ಮಾಡಲಿದ್ದಾರೆ. ವಿಶ್ವಕಪ್ ಗೆಲ್ಲುವಲ್ಲಿ ಸಹಾಯಕ ಸಿಬ್ಬಂದಿಯ ಕಾರ್ಯವೂ ಶ್ಲಾಘನೀಯ. ನಾವು ಕಳೆದ 14 ತಿಂಗಳುಗಳಿಂದ ಪ್ರಯತ್ನಪಡುತ್ತಾ ಬಂದಿದ್ದೇವೆ. ಹೀಗಾಗಿ ಪ್ರಶಸ್ತಿ ಗೆಲ್ಲಲು ನಾವು ಅರ್ಹರಾಗಿದ್ದೇವೆ’’ಎಂದು ಭಾರತದ ಅಂಡರ್-19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
‘‘ಈ ತಂಡಕ್ಕೆ ಕೋಚಿಂಗ್ ನೀಡುವಾಗ ಸಾಕಷ್ಟು ಗಮನ ನೀಡಲಾಗಿತ್ತು. ಫೀಲ್ಡಿಂಗ್ ಕೋಚ್ ಅಭಯ್ ಶರ್ಮ, ಬೌಲಿಂಗ್ ಕೋಚ್ ಪರಾಸ್ ಮ್ಹಾಂಬ್ರೆ ಸಹಿತ ಇಡೀ ಸಹಾಯಕ ಸಿಬ್ಬಂದಿ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ನಾವು ಕಳೆದ 14 ತಿಂಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಇಂತಹ ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಿರುವುದು ಸಂತೋಷದ ವಿಷಯ’’ ಎಂದು ದ್ರಾವಿಡ್ ಹೇಳಿದ್ದಾರೆ.